
ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನಾಡುತ್ತಿದ್ದು ಅದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ವೈಟ್ಬಾಲ್ ಸರಣಿಯನ್ನು ಭಾರತದಲ್ಲಿಯೇ ಆಡಲಿದೆ. ಆದರೆ ಸದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈ ಸರಣಿಗಳ ನಂತರ ನಡೆಯುವ ಟೆಸ್ಟ್ ಸರಣಿಯ ಮೇಲಿದೆ. ಫೆಬ್ರವರಿ 9ರಿಂದ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದೆ. ಈ ಬಹುನಿರೀಕ್ಷಿತ ಸರಣಿಯಲ್ಲಿ ಟೀಮ್ ಇಂಡಿಯಾದ ಸೆಣೆಸಾಡುವ ಕಾರಣ ಪ್ರಮುಖ ವೇಗಿಗೆ ಸದ್ಯ ವಿಶ್ರಾಂತಿ ನೀಡಬೇಕು ಎಂದು ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ.
ಗೌತಮ್ ಗಂಭೀರ್ ಹೀಗೆ ಒತ್ತಾಯಿಸಿದ್ದು ಟೀಮ್ ಇಂಡಿಯಾದ ಅನುಭವಿ ವೇಗಿಯಾದ ಮೊಹಮ್ಮದ್ ಶಮಿ ಬಗ್ಗೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ್ನು ದೃಷ್ಟಿಯಲ್ಲಿಟ್ಟುಕೊಂಡು ಶಮಿಗೆ ವಿಶ್ರಾಂತಿ ನೀಡಬೇಕು ಎಂದು ಗಂಭೀರ್ ಒತ್ತಾಯಿಸಿದ್ದಾರೆ. ಈಡನ್ ಗಾರ್ಡನ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಬಳೀಕ ಆತನಾಡಿದ ಗೌತ್ ಗಂಭೀರ್ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದೆ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯುವ ಆಟಗಾರ ಅರ್ಶ್ದೀಪ್ ಸಿಂಗ್ಗೆ ಅವಕಾಶ ನೀಡುವ ಮೂಲಕ ಅನುಭವಿ ಆಟಗಾರ ಶಮಿಗೆ ವಿಶ್ರಾಂತಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
"ಮುಂದಿನ ಪಂದ್ಯದಲ್ಲಿ ನಾನು ಮೊಹಮ್ಮದ್ ಶಮಿಯ ಬದಲಾಗಿ ಅರ್ಶ್ದೀಪ್ ಸಿಂಗ್ ಆಡುವುದನ್ನು ನೋಡಲು ಬಯಸುತ್ತೇನೆ. ಯಾಕೆಂದರೆ ಬೂಮ್ರಾ ಫಿಟ್ ಆಗಿಲ್ಲವಾದ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಾಕಷ್ಟು ಬೌಲಿಂಗ್ ನಡೆಸಬೇಕಾಗುತ್ತದೆ. ಅದೇ ಸಂದರ್ಭದಲ್ಲಿ ನೀವು ಅರ್ಶ್ದೀಪ್ ಸಿಂಗ್ ಅವರನ್ನು ಏಕದನ ಮಾದರಿಯಲ್ಲಿ ಬೆಳೆಸಬಹುದು" ಎಂದಿದ್ದಾರೆ ಗೌತಮ್ ಗಂಭೀರ್.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬ್ಯಾಟರ್ಗಳು ವಿಶ್ವಕಪ್ ದೃಷ್ಟಿಯಿಂದ ಹೆಚ್ಚು ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ. ಬ್ಯಾಟರ್ಗಳು ವಿಶ್ವಕಪ್ ದೃಷ್ಟಿಯಿಂದ ಸಾಧ್ಯವಾದಷ್ಟು ಹೆಚ್ಚಿನ ಪಂದ್ಯಗಳ್ನು ಆಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.
"ಭಾರತದ ವೇಗದ ಬೌಲರ್ಗಳಿಗೆ ವಿಶ್ರಾಂತಿ ನೀಡುವುದಕ್ಕೆ ನಾನು ವಿರೋಧಿಸಲಾರೆ, ಆದರೆ ನಿಮ್ಮ ಬ್ಯಾಟರ್ಗಳಿಗೆ ವಿಶ್ರಾಂತಿ ನೀಡಬಾರದು. ಏಕದಿನ ಮಾದರಿಯಲ್ಲಿ ಅವರು ಸ್ಥಿರವಾಗಿ ಆಡುತ್ತಾ ಇರಬೇಕಾಗುತ್ತದೆ. ಏಕದಿನ ಮಾದರಿಯಲ್ಲಿ ವಿಶ್ವಕಪ್ನ ವರೆಗೂ ಅವರು ಆಡುತ್ತಾ ಇರಬೇಕು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಗಂಭೀರ್.