
ನವದೆಹಲಿ, ಆಗಸ್ಟ್ 19: ಲೋಕಸಭೆ ಚುನಾವಣೆ 2019ಗೆ ವಿವಿಧ ಪಕ್ಷಗಳು ಭರ್ಜರಿಯಾಗಿ ತಯಾರಿ ನಡೆಸಿವೆ. ಈ ನಡುವೆ ದೆಹಲಿಯಲ್ಲಿ ತನ್ನ ಪ್ರಭುತ್ವ ಸ್ಥಾಪಿಸಲು ಬಿಜೆಪಿ ಮುಂದಾಗಿದ್ದು, ಕ್ರಿಕೆಟರ್ ಗೌತಮ್ ಗಂಭೀರ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಜ್ಜಾಗಿದೆ ಎಂಬ ಸುದ್ದಿ ಬಂದಿದೆ.
ಕ್ರಿಕೆಟ್ ಆಟಗಾರರು ಹಾಗೂ ರಾಜಕೀಯಕ್ಕೂ ಇರುವ ನಂಟು ಹೊಸದೇನಲ್ಲ. ನವಜೋತ್ ಸಿಂಗ್ ಸಿದ್ದು, ಮೊಹಮ್ಮದ್ ಅಜರುದ್ದೀನ್ ಅವರು ಇಂದು ಸಕ್ರಿಯ ರಾಜಕಾರಣಿಗಳಾಗಿದ್ದಾರೆ. ಪಾಕಿಸ್ತಾನದಲ್ಲಿ ನಿನ್ನೆಯಿನ್ನೂ ಪ್ರಧಾನಿಯಾಗಿ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಒಂದು ಕಾಲದಲ್ಲಿ ಭಾರತದ ಕ್ರಿಕೆಟ್ ತಂಡದ ಪ್ರಮುಖ ಓಪನರ್ ಎನಿಸಿಕೊಂಡಿದ್ದ ಗೌತಮ್ ಗಂಭೀರ್ ಅವರು ರಾಜಕೀಯಕ್ಕೆ ಕಾಲಿಡುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ನಡೆಸಲಿದ್ದಾರೆ ಎಂಬ ಸುದ್ದಿಯಿದೆ.
2016 ರಲ್ಲಿ ಕೊನೆ ಟೆಸ್ಟ್ ಪಂದ್ಯ ಆಡಿದ್ದ ಗಂಭೀರ್, ನಂತರ ದೆಹಲಿ ಪರ ರಣಜಿ ಆಡುತ್ತಿದ್ದಾರೆ. 58 ಟೆಸ್ಟ್ ಪಂದ್ಯ, 147 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಗಳಿಂದ 20 ಶತಕ, 9392ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ ಗಂಭೀರ್ ಯಶಸ್ಸು ಕಾಣಲಿಲ್ಲ.