ಕೋಲ್ಕತ್ತಾ, ಏಪ್ರಿಲ್ 26 : ರಿಯೋ ಒಲಿಂಪಿಕ್ಸ್ ಗೆ ಭಾರತದ ಅಥ್ಲೀಟ್ ಗಳ ರಾಯಭಾರಿಯಾಗಿ ನಟ ಸಲ್ಮಾನ್ ಖಾನ್ ಅವರನ್ನು ನೇಮಕ ಮಾಡಿದ್ದಕ್ಕೆ ಹಲವಾರು ಸೆಲೆಬ್ರಿಟಿಗಳು ಅಪಸ್ವರ ಎತ್ತಿದ್ದಾರೆ. ಕುಸ್ತಿಪಟು ಯೋಗೇಶ್ವರ್ ದತ್, ಮಿಲ್ಕಾಸಿಂಗ್ ನಂತರ ಈಗ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಸಲ್ಮಾನ್ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಿಯೋ ಒಲಿಂಪಿಕ್ ನ ಭಾರತ ತಂಡದ ರಾಯಭಾರಿ ಸ್ಥಾನಕ್ಕೆ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಅಭಿನವ ಬಿಂದ್ರಾ ಅವರು ಸೂಕ್ತ, ಹಾಗಾಗಿ ಅವರನ್ನು ನೇಮಿಸಬೇಕಿತ್ತು ಎಂದು ಗಂಭೀರ್ ಹೇಳಿದ್ದಾರೆ.

ಸಿನಿಮಾದವರನ್ನು ಕ್ರೀಡೆಗಳಿಗೆ ರಾಯಭಾರಿಯನ್ನಾಗಿ ಮಾಡಿದರೆ ಕ್ರೀಡಾಪಟುಗಳ ಬಗ್ಗೆ ಅವರಿಗೇನು ಗೊತ್ತಿರುತ್ತದೆ, ಕ್ರೀಡೆಗಳಿಗೆ ಕ್ರೀಡಾಪಟುಗಳನ್ನೇ ನೇಮಕ ಮಾಡಬೇಕಿತ್ತು ಎಂದು ಗಂಭೀರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಗಸ್ಟ್ 5 ರಿಂದ ಅಗಸ್ಟ್ 15 ರ ವರೆಗೆ ಬ್ರೆಜಿಲ್ ನ ರಿಯೋ ಡಿ ಜಿನೈರೋನಲ್ಲಿ ನಡೆಯಲಿದೆ.