ಈ ಬಾರಿಯ ವಿಶ್ವಕಪ್ನಲ್ಲಿ ಅಭಿಮಾನಿಗಳ ಕುತೂಹಲ ಹೆಚ್ಚುವಂತೆ ಮಾಡಿದ ಮುಖಾಮುಖಿಯಲ್ಲಿ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಕೂಡ ಒಂದು. ಕಳೆದ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಈ ಇಬ್ಬರ ನಡುವಿನ ಮಾತಿನ ಚಕಮಕಿ ಇದಕ್ಕೆ ಕಾರಣ. ಆ ಘಟನೆಯ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿಯಾದ ಈ ಇಬ್ಬರ ಸೆಣೆಸಾಟವನ್ನು ಅಭಿಮಾನಿಗಳು ಕಾತರದಿಂದ ಕಾದಿದ್ದರು.
ನಿರೀಕ್ಷೆಯಂತೆಯೇ ಈ ಇಬ್ಬರ ಮುಖಾಮುಖಿ ಅಭಿಮಾನಿಗಳನ್ನು ಮನರಂಜಿಸಿತು. ಆದರೆ ಕಳೆದ ಐಪಿಎಲ್ ಸಂದರ್ಭದಲ್ಲಿ ಕಿತ್ತಾಡಿಕೊಂಡಿದ್ದ ಇಬ್ಬರು ಕ್ರಿಕೆಟಿಗರು ಈ ಪಂದ್ಯದಲ್ಲಿ ಪರಸ್ಪರ ಕೈಕುಲುಕಿಕೊಂಡು ಸ್ನೇಹದ ಹಸ್ತ ಚಾಚಿಕೊಂಡಿದ್ದು ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಭಾರತದ ಬ್ಯಾಟಿಂಗ್ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಭಾರತ ಅಫ್ಘಾನಿಸ್ತಾನ ಪಂದ್ಯದಲ್ಲಿ ಪ್ರಮುಖ ಹೈಲೈಟ್ಸ್ಗಳಲ್ಲಿ ಒಂದೆನಿಸಿತು.

ವಿರಾಟ್ ಕೊಹ್ಲಿ ಮೈದಾನದಲ್ಲಿ ಯಾವಾಗಲೂ ಅತ್ಯಂತ ಆಕ್ರಮಣಕಾರಿ ಮನೋಭಾವ ಹೊಂದಿರುವ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಎದುರಾಳಿ ಕೆಣಕಿದರೆ ಅದಕ್ಕೆ ತಕ್ಕನಾಗಿ ಪ್ರತಿಕ್ರಿಯೆ ನೀಡುವದರಲ್ಲಿಯೂ ಕೊಹ್ಲಿ ಪ್ರಸಿದ್ಧ. ಆದರೆ ಈ ಪಂದ್ಯದಲ್ಲಿ ನವೀನ್ ಉಲ್ ಹಕ್ ಅವರನ್ನು ದೆಹಲಿ ಕ್ರೀಡಾಂಗಣದ ಪ್ರೇಕ್ಷಕರು ಅಪಹಾಸ್ಯ ಮಾಡುತ್ತಿದ್ದಾಗ ಕೊಹ್ಲಿಗೂ ಇದು ಸರಿ ಎನಿಸಲಿಲ್ಲ. ಹೀಗಾಗಿ ಸ್ವತಃ ವಿರಾಟ್ ಕೊಹ್ಲಿ ದೆಹಲಿ ಪ್ರೇಕ್ಷಕರಿಗೆ ಮೈದಾನದಿಂದಲೇ ಸುಮ್ಮನಾಗುವಂತೆ ಸನ್ನೆ ಮೂಲಕ ತೋರಿಸಿದರು. ಕೊಹ್ಲಿಯ ಈ ನಡೆ ಕೂಡ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಐಪಿಎಲ್ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಮಾತಿನ ಚಕಮಕಿಯ ಸಂದರ್ಭದಲ್ಲಿ ಅದಕ್ಕಿಂತಲೂ ಹೆಚ್ಚು ಸಿದ್ದುಯಾಗಿದ್ದು ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಮಾತಿನ ಸಂಘರ್ಷ. ತನ್ನ ತಂಡದ ಆಟಗಾರ ನವೀನ್ ಉಲ್ ಹಕ್ಗೆ ಬೆಂಬಲವಾಗಿ ನಿಂತು ಕೊಹ್ಲಿಯ ವಿರುದ್ಧ ಮಾತಿನ ಸಮರಕ್ಕೆ ಇಳಿದಿದ್ದರು ಗೌತಮ್ ಗಂಭೀರ್. ಇದೀಗ ಭಾರತ vs ಅಫ್ಘಾನಿಸ್ತಾನ ಪಂದ್ಯದ ಸಂದರ್ಭದಲ್ಲಿ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಪರಸ್ಪರ ಹಸ್ತಲಾಘವ ಮಾಡಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ನೀವು ಜಗಳ ಮಾಡಿಕೊಂಡಿರುವುದು ಮೈದಾನದ ಒಳಗೆ. ಮೈದಾನದ ಆಚೆ ಅಲ್ಲ. ತನ್ನ ತಂಡದ ಪರವಾಗಿ, ತನ್ನ ಗೌರವಕ್ಕಾಗಿ ಹಾಗೂ ಗೆಲುವಿಗಾಗಿ ಜಗಳ ಮಾಡಲು ಪ್ರತಿ ಆಟಗಾರನಿಗೂ ಹಕ್ಕಿದೆ. ಅದು ನೀವು ಯಾವುದೇ ದೇಶದ ಪರವಾಗಿ ಆಡುತ್ತಿದ್ದರೂ ಪರವಾಗಿಲ್ಲ. ಹಾಗೂ ಅದಕ್ಕಾಗಿ ನೀವು ಎಷ್ಟು ಉತ್ತಮ ಆಟಗಾರ ಎನ್ನುವುದು ಕೂಡ ಮುಖ್ಯವಾಗುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಕೂಡ ಆಗಿರುವ ಗೌತಮ್ ಗಂಭೀರ್.