2023ರ ಏಷ್ಯಾ ಕಪ್ ಮತ್ತು ವಿಶ್ವಕಪ್ ಪಂದ್ಯಾವಳಿಗಳು ಹತ್ತಿರವಾಗುತ್ತಿದ್ದಂತೆಯೇ ಭಾರತ ತಂಡವು ಸಿದ್ಧತೆ ಆರಂಭಿಸಿದೆ. ಬಿಸಿಸಿಐ ಇತ್ತೀಚಿಗೆ ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಿದೆ.
ಇದೇ ವೇಳೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಪುನರಾಗಮನವು ದೊಡ್ಡ ಸುದ್ದಿಯಾಗಿದೆ. ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ನಂತಹ ಎಲ್ಲಾ ಪ್ರಮುಖ ಪಂದ್ಯಾವಳಿಗಳಿಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಕಾರಣ, ಶ್ರೇಯಸ್ ಅಯ್ಯರ್ ಅವರು ಫಿಟ್ ಎಂದು ಘೋಷಿಸಿದ ನಂತರ ಭಾರತೀಯ ಅಭಿಮಾನಿಗಳಿಗೆ ಸಮಾಧಾನ ತರಿಸಿತು.

ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಏಷ್ಯಾ ಕಪ್ ಪಂದ್ಯಾವಳಿಗೆ ಸಜ್ಜಾಗುತ್ತಿದ್ದು, ದೀರ್ಘಕಾಲದ ಬೆನ್ನು ನೋವಿನ ನಂತರ ಪುನರಾಗಮನ ಮಾಡುತ್ತಿದ್ದಾರೆ. ಏಷ್ಯಾ ಕಪ್ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.
ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಶ್ರೇಯಸ್ ಅಯ್ಯರ್ ಆಗಸ್ಟ್ 18ರಂದು ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದರು. ಈ ಮೂಲಕ ಅವರ ಫಿಟ್ನೆಸ್ ಕುರಿತ ಊಹಾಪೋಹಗಳನ್ನು ಹೋಗಲಾಡಿಸಿತು.
ವರದಿಯ ಪ್ರಕಾರ, ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಅಭ್ಯಾಸ ಆಟದಲ್ಲಿ ಒಟ್ಟು 38 ಓವರ್ಗಳವರೆಗೆ ಬ್ಯಾಟ್ ಬೀಸಿದರು ಮತ್ತು ನಂತರ, 50 ಓವರ್ಗಳ ಫೀಲ್ಡಿಂಗ್ ಮಾಡಿದರು. ಅಭ್ಯಾಸ ಆಟದಲ್ಲಿ ಶ್ರೇಯಸ್ ಅಯ್ಯರ್ 199 ರನ್ ಗಳಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
""ಶ್ರೇಯಸ್ ಅಯ್ಯರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲರ್ಗಳನ್ನು ದಂಡಿಸಿದರು ಮತ್ತು 199 ರನ್ ಗಳಿಸಿದರು. ರಾಷ್ಟ್ರೀಯ ಆಯ್ಕೆಗಾರರಿಗೆ ಅವರ ಫಿಟ್ನೆಸ್ ಬಗ್ಗೆ ಹೆಚ್ಚಿನ ಸಾಕ್ಷ್ಯ ಒದಗಿಸಲು, 3/4 ದಿನಗಳ ಹಿಂದೆ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪಂದ್ಯದ ಸಂಪೂರ್ಣ 50 ಓವರ್ಗಳಿಗೆ ಫೀಲ್ಡಿಂಗ್ ಮಾಡಿದರು,'' ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ನಂತರ, ಭಾರತ ಪುರುಷರ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಸೋಮವಾರ, ಆಗಸ್ಟ್ 21ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಏಷ್ಯಾ ಕಪ್ಗಾಗಿ 17 ಸದಸ್ಯರ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಘೋಷಿಸಲಾಯಿತು.
ಸೆಪ್ಟೆಂಬರ್ 2ರಂದು ಏಷ್ಯಾ ಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ.
ಇದೇ ವೇಳೆ ಆರು ರಾಷ್ಟ್ರಗಳ ಪಂದ್ಯಾವಳಿಗೆ ಉತ್ತಮ ತಯಾರಿ ಮತ್ತು ಪಂದ್ಯಕ್ಕೆ ಸಿದ್ಧವಾಗಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯಲ್ಲಿ 5 ದಿನಗಳ ತರಬೇತಿ ಶಿಬಿರದಲ್ಲಿ ತೊಡಗಿಸಿಕೊಳ್ಳಲಿದೆ.
ಇನ್ನು ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಸೇರಿದಂತೆ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಶುಕ್ರವಾರ, ಆಗಸ್ಟ್ 25ರಂದು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಜಯ ಸಾಧಿಸಿದೆ.