ವಿಶ್ವಕಪ್ ಟೂರ್ನಿಯಲ್ಲಿ ಉಳಿದೆಲ್ಲಾ ಪಂದ್ಯಗಳ ಮೇಲೆ ಒಂದು ಕುತೂಹಲವಾದರೆ ಭಾರತ vs ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಇರುವ ಕಾತರತೆಯೇ ಬೇರೆ. ಅಹ್ಮದಾಬಾದ್ನ ನರೇಂದ್ರ ಮೊದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಂದಿನ ಶನಿವಾರ ಈ ಪಂದ್ಯವನ್ನಾಡುತ್ತಿದ್ದು ಕ್ರಿಕೆಟ್ ಜಗತ್ತಿನ ಎಲ್ಲಾ ಅಭಿಮಾನಿಗಳು ಕೂಡ ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಎರಡು ತಂಡಗಳು ಮುಖಾಮುಖಿಯಾದಾಗ ಜಿದ್ದಾಜಿದ್ದಿನಿಂದ ಕಾದಾಡುತ್ತಾ ಬರುತ್ತಿಒದ್ದು ವಿಶ್ವಕಪ್ನಂಥಾ ವೇದಿಕೆಯಲ್ಲಿ ಭಾರತ ಈ ಎರಡು ತಂಡಗಳ ಮುಖಾಮುಖಿಗೆ ಭಾರೀ ನಿರೀಕ್ಷೆ ಇದ್ದೇ ಇದೆ. ಇನ್ನು ಏಕದಿನ ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆ ಹೊಂದಿದ್ದು ಈ ಬಾರಿಯೂ ಆ ದಾಖಲೆಯನ್ನು ಉಳಿಸಿಕೊಳ್ಳುತ್ತಾ ಎನ್ನುವುದು ಈಗ ಇರುವ ಕುತೂಹಲ.

ಇನ್ನು ಶನಿವಾರ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಮತ್ತಷ್ಟು ವಿಶೇಷವಾಗಿಸಲು ಆಯೋಜಕರಾದ ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಪಂದ್ಯದ ಆರಂಭಕ್ಕೂ ಮುನ್ನ ಅದ್ದೂರಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎನ್ನಲಾಗಿದ್ದು ಕೆಲ ಗಣ್ಯರು ಈ ಪಂದ್ಯಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಶನಿವಾರ ಅಹ್ಮದಾಬಾದ್ನ ನರೇಂದರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವವಾಗಲಿದೆ. ಈ ಪಂದ್ಯಕ್ಕೂ ಮುನ್ನ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವರ್ಣರಂಜಿತ ಕಾರ್ಯಕ್ರಮ ಇರಲಿದ್ದು ಇದರಲ್ಲಿ ಭಾರತದ ಖ್ಯಾತ ಗಾಯದ ಅರಿಜಿತ್ ಸಿಂಗ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಪಂದ್ಯಕ್ಕೆ ದೇಶದ ಹಲವು ಗಣ್ಯರು ಸಾಕ್ಷಿಯಾಗಲಿದ್ದು ಅಮಿತಾಬ್ ಬಚ್ಚನ್, ರಜನಿಕಾಂತ್, ಸಚಿನ್ ತೆಂಡೂಲ್ಕರ್ ಭಾಗಿಯಾಗುವ ನಿರೀಕ್ಷೆಯಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ಮುಖಾಮುಖಿಯ ಮೂಲಕ ಆರಂಭವಾಗಿತ್ತು. ಆಧರೆ ಕಳೆದ ವಿಶ್ವಕಪ್ನ ಎರಡು ಫೈನಲಿಸ್ಟ್ ತಂಡಗಳ ನಡುವಿನ ಈ ಪಂದ್ಯ ಅತ್ಯಂತ ನೀರಸವಾಗಿ ಆಯೋಜನೆಯಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಅಹ್ಮದಾಬಾದ್ನ ಇದೇ ಬೃಹತ್ ಕ್ರೀಡಾಂಗಣದಲ್ಲಿ ಆ ಪಂದ್ಯ ಆಯೋಜನೆಯಾಗಿ ಪ್ರೇಕ್ಷಕರಿಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗುವಂತೆ ಮಾಡಿತ್ತು. ಆದರೆ ಉದ್ಘಾಟನಾ ಪಂದ್ಯ ನಡೆದು ಬರೊಬ್ಬರಿ 10 ದಿನಗಳ ನಂತರ ನಡೆಯುವ ಈ ಪಂದ್ಯಕ್ಕೆ ಯಾವ ಕಾರಣಕ್ಕಾಗಿ ಸಂಭ್ರಮ ಎನ್ನುವುದು ಪ್ರಶ್ನಿಸುವಂತೆ ಮಾಡಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯಕ್ಕೆ ಅಭಿಮಾನಿಗಳಲ್ಲಿನ ಕುತೂಹಲ ಸಹಜ. ತೀವ್ರ ಪೈಪೊಟಿಯ ಈ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ವಿಶ್ವಕಪ್ ಟೂರ್ನಿಯ ಪ್ರತಿ ಪಂದ್ಯಗಳು ಕೂಡ ಅತ್ಯಂತ ಮಹತ್ವ ಪಡೆದುಕೊಂಡಿರುತ್ತದೆ. ಆದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯಕ್ಕೆ ಆಯೋಜಕರಾದ ಐಸಿಸಿ ಹಾಗೂ ಬಿಸಿಸಿಐ ಈ ರೀತಿಯ ವಿಶೇಷ ಮನ್ನಣೆ ನೀಡಿರುವುದು ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ. ಬಿಸಿಸಿಐನ ಈ ಅಚ್ಚರಿಯ ನಡೆಯನ್ನು ಅಭಿಮಾನಿಗಳು ಕೂಡ ಈಗ ಪ್ರಶ್ನಿಸುತ್ತಿದ್ದಾರೆ.
ಒಂದಡೆ ಬಿಸಿಸಿಐ ಪಾಕಿಸ್ತಾನದ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸದ ನಿಲುವಿಗೆ ಗಟ್ಟಿಯಾಗಿ ನಿಂತುಕೊಂಡಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಾ ಬರುತ್ತಿದೆ. ಒಂಥಾ ಸಂದರ್ಭದಲ್ಲಿ ಇತರ ಪಂದ್ಯಗಳಂತೆಯೇ ಈ ಮುಖಾಮುಖಿಯನ್ನು ಕೂಡ ನೋಡಬೇಕಿದ್ದ ಬಿಸಿಸಿಐ ಈ ಒಂದು ಪಂದ್ಯಕ್ಕೆ ವಿಶೇಷ ಮಾನ್ಯತೆ ನೀಡಿರುವುದು ಪ್ರಶ್ನಾರ್ಹ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐನ ಇಂಥಾ ನಡೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿ ಮಾಡುವ ಜೊತೆಗೆ ಭಾರತೀಯ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ.