ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಗ್ ಫೈಟ್ ಭಾನುವಾರ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಹಲವು ಕ್ರಿಕೆಟ್ ಪಂಡಿತರು ತಮ್ಮ ತಮ್ಮ ಅನಿಸಿಕೆ ನೀಡುತ್ತಿದ್ದಾರೆ. ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಸಹ ತಮ್ಮ ಅನಿಸಿಕೆ ನೀಡಿದ್ದು, ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಬಹುದು ಎಂದು ತಿಳಿಸಿದ್ದಾರೆ.
ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸುವ ವಿಶ್ವಾಸವನ್ನು ಹೊಂದಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸೊಗಸಾದ ಫಾರ್ಮ್ನಲ್ಲಿದ್ದು, ಎಲ್ಲರ ಚಿತ್ತ ಕದ್ದಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲೂ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸುವ ಯೋಜನೆ ಹೊಂದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಮಾತನಾಡಿರುವ ಹರ್ಭಜನ್ ಸಿಂಗ್, ಭಾರತ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆದರೆ ಪಾಕ್ ವಿರುದ್ಧ ಎಚ್ಚರಿಕೆಯಿಂದ ಆಡಿದಲ್ಲಿ ಗೆಲುವು ಸಾಧಿಸಬಹುದು ಎಂದಿದ್ದಾರೆ.

ಹರ್ಭಜನ್ ಸಿಂಗ್ ಎಎನ್ಐ ಜೊತೆಗೆ ಮಾತನಾಡಿರುವ ಇವರು, ಭಾರತ ತನ್ನ ಕ್ಷಮತೆಗೆ ತಕ್ಕ ಆಟವನ್ನು ಆಡಬೇಕಿದೆ. ಉಸ್ಮಾನ್ ತಾರೀಕ್ ಅವರನ್ನು ತಾಳ್ಮೆಯಿಂದ ಎದುರಿಸಿ ಎಂಬ ಸಲಹೆಯನ್ನು ನೀಡಿದ್ದಾರೆ. ಭಾರತ ಈ ಪಂದ್ಯ ಗೆಲ್ಲಲಿದೆ. ಉಸ್ಮಾನ್ ತಾರೀಕ್ ವಿರುದ್ಧ ನಮ್ಮ ತಂಡದ ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸವನ್ನು ಹರ್ಭಜನ್ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದಲ್ಲಿ ಉಸ್ಮಾನ್ ತಾರೀಕ್ ಅವರನ್ನು ಎದುರಿಸಬಲ್ಲ ಕ್ಷಮತೆ ಇರುವ ಬ್ಯಾಟರ್ಗಳು ಇದ್ದಾರೆ. ಭಾನುವಾರ ನೈಜ ಆಟವನ್ನು ಆಡಬೇಕಿದೆ. ಅಲ್ಲದೆ ಯಾವುದೇ ಒತ್ತಡವನ್ನು ತೆಗೆದುಕೊಳ್ಳದೇ ಆಡಿದರೆ ಗೆಲುವು ಸಾಧ್ಯ ಎಂದು ಹೇಳಿದ್ದಾರೆ.
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡದ ಸ್ಟಾರ್ ಬೌಲರ್ ಉಸ್ಮಾನ್ ತಾರೀಕ್ ತಮ್ಮ ವಿಭಿನ್ನ ಶೈಲಿಯ ಸ್ಪಿನ್ ದಾಳಿಯಿಂದ ಗಮನ ಸೆಳೆದಿದ್ದಾರೆ. ಇವರು ಮಿಸ್ಟ್ರಿ ಸ್ಪಿನ್ ಬೌಲರ್ ಎಂದು ಖ್ಯಾತಿ ಪಡೆಯುತ್ತಿದ್ದಾರೆ. ಇವರ ವಿಭಿನ್ನ ಬೌಲಿಂಗ್ ಶೈಲಿ ಇವರ ಬಗ್ಗೆ ಚರ್ಚೆಗಳು ನಡೆಯುವಂತೆ ಮಾಡಿವೆ. ಉಸ್ಮಾನ್ ತಾರೀಕ್ ಪಾಕ್ ತಂಡದ ಹಲವು ಪಂದ್ಯಗಳಲ್ಲಿ ಮಿಂಚಿದ್ದಾರೆ.
ಉಸ್ಮಾನ್ ತಾರೀಕ್ ಬೌಲಿಂಗ್ ಮಾಡುವಾಗ ಕೊಂಚ ನಿಂತು ಬೌಲ್ ಮಾಡುತ್ತಾರೆ. ಈ ಆಕ್ಷನ್ ಕೊಂಚ ಭಿನ್ನವಾಗಿದ್ದು, ಬ್ಯಾಟರ್ಗಳನ್ನು ಗೊಂದಲಕ್ಕೆ ದೂಡಲಿದೆ. ಹೀಗಾಗಿ ಈ ಬೌಲರ್ ಎದುರಿಸುವುದು ದೊಡ್ಡ ಸವಾಲಾಗಿದೆ. ಉಸ್ಮಾನ್ ತಾರೀಕ್ ಅವರ ಸವಾಲನ್ನು ಮೆಟ್ಟಿನಿಂತಲ್ಲಿ ಭಾರತ, ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಬಹುದು. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಭಾರತದ ಸಾಧನೆ ಅಮೋಘವಾಗಿದೆ. ಭಾರತ ಈ ವರೆಗೆ ಪಾಕಿಸ್ತಾನ ವಿರುದ್ಧ ಆಡಿದ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದೆ. ಈ ಸಂಖ್ಯೆಗೆ ಇನ್ನೊಂದು ಗೆಲುವನ್ನು ಸೇರಿಸುವ ಕನಸು ಭಾರತ ತಂಡದ್ದಾಗಿದೆ.