ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅನುಭವಿ ಆಟಗಾರ ಶಿಖರ್ ಧವನ್ ಭಾರತೀಯ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡ ವಿಚಾರವಾಗಿ ಮಾತನಾಡಿದ್ದಾರೆ. ಶಿಖರ್ ಧವನ್ ಭಾರತೀಯ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡ ಬಗ್ಗೆ ಹರ್ಭಜನ್ ಸಿಂಗ್ ಬೇಸರವನ್ನು ವ್ಯಕ್ತಪಡಿಸಿದ್ದು ಧವನ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವನ್ನು ಐಪಿಎಲ್ನಲ್ಲಿ ಮುನ್ನಡೆಸುತ್ತಿರುವ ಧವನ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದರು. 56 ಎಸೆತಗಳನ್ನು ಎದುರಿಸಿದ ಧವನ್ 86 ರನ್ಗಳನ್ನು ಗಳಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ರನ್ಗಳ ಅಂತರದ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

"ಶಿಖರ್ ಧವನ್ ಕೆಲ ಪ್ರವಾಸಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. ಆದರೆ ಹಠಾತ್ ಆಗಿ ಧವನ್ ಅವರನ್ನು ಇನ್ನು ನಿಮ್ಮ ಅಗತ್ಯವಿಲ್ಲ ಎಂಬಂತೆ ತಂಡದಿಂದ ಕೈಬಿಡಲಾಯಿತು. ನನಗೆ ಇದು ಬಹಳ ಬೇಸರವನ್ನುಂಟು ಮಾಡಿತು. ಯಾಕೆಂದರೆ ಎಲ್ಲರನ್ನು ಕೂಡ ಒಂದೇ ರೀತಿಯಾಗಿ ಕಾಣಬೇಕು. ಆತನೋರ್ವ ದೊಡ್ಡ ಆಟಗಾರನಾಗಿದ್ದು ಭಾರತೀಯ ಕ್ರಿಕೆಟ್ಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ ಹರ್ಭಜನ್ ಸಿಂಗ್.
"ನೀವು ಅವರನ್ನು ಈ ರೀತಿಯಾಗಿ ನಡೆಸಿಕೊಳ್ಳಬಾರದು. ಅವರು 56 ಎಸೆತಗಳಲ್ಲಿ 86 ರನ್ ಬಾರಿಸಿದ್ದಾರೆ. ಇಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಲು ಬಯಸುವುದಿಲ್ಲ. ಆದರೆ ಉದಾಹರಣೆಯಾಗಿ ನೀಡುವುದಾದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಥವಾ ಕೆಎಲ್ ರಾಹುಲ್ ಅವರಂತಾ ದೊಡ್ಡ ಹೆಸರನ್ನು ತೆಗೆದುಕೊಳ್ಳಿ. ಆವರಿಗೆ ನೀವು ಸಾಕಷ್ಟು ಅವಕಾಶಗಳನ್ನು ನೀಡಿದ್ದೀರಿ. ಆದರೆ ಶಿಖರ್ ಧವನ್ಗೆ ಭಾರತ ತಂಡದಲ್ಲಿ ಈಗ ಸ್ಥಾನವಿಲ್ಲ. ಆತ ಯಾವಾಗಲೂ ತಂಡಕ್ಕೆ ಕೊಡುಗೆ ನೀಡಿಕೊಂಡೇ ಬಂದಿದ್ದಾರೆ. ಹಾಗಿದ್ದರೂ ಆತನಿಗೆ ಯಾಕೆ ಅವಕಾಶವಿಲ್ಲ. ಫಿಟ್ನೆಸ್ ವಿಚಾರವನ್ನು ನೊಡಿದರೆ ಆತ ವಿರಾಟ್ ಕೊಹ್ಲಿಯಷ್ಟೇ ಸಮರ್ಥ" ಎಂದಿದ್ದಾರೆ.
ಈ ಪಂದ್ಯದಲ್ಲಿ ಶಿಖರ್ ಧವನ್ ಯುವ ಆಟಗಾರ ಪ್ರಬ್ಸಿಮ್ರಾನ್ ಸಿಂಗ್ ಜೊತೆಗೂಡಿ ಅದ್ಭುತವಾದ ಆರಂಭವನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ನೀಡಿದರು. ಮೊದಲ ವಿಕೆಟ್ಗೆ ಈ ಜೋಡಿ 90 ರನ್ಗಳ ಜೊತೆಯಾಟವನ್ನು ನೀಡಿತು. ಪ್ರಬ್ಸಿಮ್ರಾನ್ 34 ಎಸೆತಗಳನ್ನು ಎದುರಿಸಿ 60 ರನ್ ಬಾರಿಸಿ ಸ್ಪೋಟಕ ಆರಂಭವನ್ನು ಪಡೆಯಲು ಕಾರಣವಾದರು. ಆದರೆ ಶಿಖರ್ ಧವನ್ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಪ್ರದರ್ಶಿಸಿದ್ದು ಮೊದಲ 44 ರನ್ಗಳನ್ನು ಗಳಿಸಲು 36 ಎಸೆತಗಳ್ನು ಬಳಸಿಕೊಂಡಿದ್ದರು. ಬಳಿಕ ತಮ್ಮ ರನ್ವೇಗವನ್ನು ಹೆಚ್ಚಿಸಿದ ಅವರು ಸ್ಪಿನ್ನರ್ಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದರು.
ಇನ್ನು ಈ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ಪ್ರಬ್ಸಿಮ್ರಾನ್ ಭರ್ಜರಿ ಪ್ರದರ್ಶನದ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ಗಳನ್ನು ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರ್ ಅಶ್ವಿನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಲೆಕ್ಕಾಚಾರ ಕೂಡ ಫಲಿಸಲಿಲ್ಲ. ನಾಯಕ ಸಂಜು ಸ್ಯಾಮ್ಸನ್, ಶಿಮ್ರಾನ್ ಹೇಟ್ಮೇಯರ್ ಧ್ರುವ್ ಜೋರೆಲ್ ಸಾಕಷ್ಟು ಹೋರಾಟ ನಡೆಸಿದರಾದರೂ 5 ರನ್ಗಳ ಅಲ್ಪ ಅಂತರದಿಂದ ಗೆಲುವು ಅಸಾಧ್ಯವಾಯಿತು. ಈ ಮೂಲಕ ಆರ್ಆರ್ ಈ ಆವೃತ್ತಿಯಲ್ಲಿ ಮೊದಲ ಸೋಲು ಕಂಡರೆ ಪಂಜಾಬ್ ಕಿಂಗ್ಸ್ ಸತತ ಎರಡನೇ ಗೆಲುವು ಸಾಧಿಸಿದೆ.