ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸಂಸದರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಇದರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಸೇರಿದ್ದಾರೆ. ಹರ್ಭಜನ್ ಸಿಂಗ್ ಬಿಜೆಪಿ ಪಕ್ಷಕ್ಕೆ ಸೇರಿದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಜಲಂಧರ್ನಲ್ಲಿರುವ ಹರ್ಭಜನ್ ಅವರ ಮನೆಯ ಹೊರಗೆ "ಗದ್ದಾರ" ಎಂದು ಬರೆದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷವು 10 ಸಂಸದರನ್ನು ಹೊಂದಿತ್ತು. ಈ 10 ಸಂಸದರಲ್ಲಿ ಈಗಾಗಲೇ 7 ಸಂಸದರು ಪಕ್ಷವನ್ನು ತೊರೆದಿದ್ದಾರೆ. ಏಳು ಸಂಸದರಲ್ಲಿ ಹರ್ಭಜನ್ ಸಿಂಗ್, ರಾಘವ್ ಛಡ್ಡಾ, ಸ್ವಾತಿ ಮಲಿವಾಲ್, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಮತ್ತು ರಾಜೇಂದ್ರ ಗುಪ್ತಾ ಸೇರಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ಸೇರಿದ ಬಗ್ಗೆ ಛಡ್ಡಾ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದು, ಆಮ್ ಆದ್ಮಿ ಪಕ್ಷದ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಹೊರಿಸಿದರು.

ಹರ್ಭಜನ್ ಸಿಂಗ್ ಬಿಜೆಪಿ ಸೇರುತ್ತಿದ್ದಂತೆ, ಪಂಜಾಬ್ ಸರ್ಕಾರ ರಾಜ್ಯಸಭಾ ಸಂಸದರ ಭದ್ರತೆಯನ್ನು ಹಿಂತೆಗೆದುಕೊಂಡಿದೆ. ಇವರಿಗೆ ಪಂಜಾಬ್ ಸರ್ಕಾರದಿಂದ Z-ಪ್ಲಸ್ ಭದ್ರತೆ ನೀಡಲಾಗಿತ್ತು. ಇನ್ನು ಹರ್ಭಜನ್ ಮನೆಯ ಹೊರಗೆ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಅವರ ಮನೆಯ ಹೊರಗಿನ ಗಡಿ ಗೋಡೆಯ ಮೇಲೆ ಗದ್ದಾರ ಎಂದು ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಹರ್ಭಜನ್ ಸಿಂಗ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಂಜಾಬ್ ಸರ್ಕಾರ ಭಜ್ಜಿಗೆ ನೀಡಿದ್ದ ಭದ್ರತೆಯನ್ನು ತೆಗೆದು ಹಾಕಿದ ಬಳಿಕ, ಕೇಂದ್ರ ಸರ್ಕಾರ ಅವರಿಗೆ ಭದ್ರತೆಯನ್ನು ನೀಡಲು ಮುಂದಾಗಿದೆ.
45 ವರ್ಷದ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ಪರ ಆಡಿ ಮಿಂಚಿದ ಆಟಗಾರ. ಇವರು ಭಾರತದ ಪರ ಮೂರು ಫಾರ್ಮೆಟ್ಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ವೇಳೆ 417 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ 4 ವಿಕೆಟ್ 16 ಬಾರಿ, 5 ವಿಕೆಟ್ 25 ಬಾರಿ ಪಡೆದಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ ಭಜ್ಜಿ 236 ಪಂದ್ಯಗಳಲ್ಲಿ 269 ವಿಕೆಟ್ ಪಡೆದಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲೂ ಭಾರತದ ಪರ ಆಡಿದ್ದು, 28 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ.