ಜೂನ್ 12 ಬುಧವಾರ, ಪಾಕಿಸ್ತಾನ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ವಿರುದ್ಧ ಟೀಮ್ ಇಂಡಿಯಾ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳುವಂತೆ ಕಾಣುತ್ತಿಲ್ಲ.
ಕಳೆದು ಮೂರು ದಿನಗಳಿಂದೆ ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು. ಈ ಸೋಲಿನ ಬಳಿಕ ಪಾಕಿಸ್ತಾನ ಅಭಿಮಾನಿಗಳೊಂದಿಗೆ ಮಾಜಿ ಆಟಗಾರರು ಅಸಂಬದ್ಧ ಮಾತನಾಡಲು ಶುರು ಮಾಡಿದ್ದಾರೆ.

ಕಮ್ರಾನ್ ಅಕ್ಮಲ್ ಕೂಡ ತಮ್ಮ ತಾಳ್ಮೆಯನ್ನು ಕಳೆದುಕೊಂಡು ಟೀಮ್ ಇಂಡಿಯಾ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ವಿರುದ್ಧ ಟೀಕೆಗಳನ್ನು ಮಾಡಿದ್ದರು.ಕೇವಲ ಟೀಕೆ ಮಾಡಿದ್ದು ಮಾತ್ರವಲ್ಲದೆ ಸಿಖ್ ಧರ್ಮದ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು.
ಈ ಕಮೆಂಟ್ ನೋಡಿದ ಹರ್ಭಜನ್ ಸಿಂಗ್ ಆಕ್ರೋಶಗೊಂಡಿದ್ದು, ಅಕ್ಮಲ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಅಕ್ಮಲ್ ಕೂಡ ಕ್ಷಮೆಯಾಚಿಸಿದ್ದರು. ಆದರೆ ಬಜ್ಜಿ ಮಾತ್ರ ಅಕ್ಮಲ್ ವಿರುದ್ಧ ಉರಿದು ಬೀಳುತ್ತಿದ್ದಾರೆ.
ಎಎನ್ಐನೊಂದಿಗೆ ಮಾತನಾಡಿರುವ ಭಜ್ಜಿ, ಕಮ್ರಾನ್ ಅಕ್ಮಲ್ ಅವರನ್ನು ಬಲವಾಗಿ ಖಂಡಿಸಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡಲು ಪ್ರಯತ್ನಿಸಬೇಡಿ. ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ ಎಂದು ಹರ್ಭಜನ್ ಹೇಳಿದ್ದಾರೆ.
ಈ ಹೇಳಿಕೆ ಅತ್ಯಂತ ಬಾಲಿಶ ಮತ್ತು ಬೇಜವಾಬ್ದಾರಿಯಾಗಿದೆ. ಒಬ್ಬ 'ಅಸಮರ್ಥ' ವ್ಯಕ್ತಿ ಮಾತ್ರ ಇದನ್ನು ಮಾಡಬಹುದು. ಯಾರ ಧರ್ಮದ ಬಗ್ಗೆಯೂ ಮಾತನಾಡುವ ಅಥವಾ ಗೇಲಿ ಮಾಡುವ ಅಗತ್ಯವಿಲ್ಲ ಎಂಬುದನ್ನು ಕಮ್ರಾನ್ ಅಕ್ಮಲ್ ಅರ್ಥಮಾಡಿಕೊಳ್ಳಬೇಕು.
ನಾನು ಅಕ್ಮಲ್ನನ್ನು ಕೇಳಲು ಬಯಸುತ್ತೇನೆ. ನಿಮಗೆ ಸಿಖ್ಖರ ಇತಿಹಾಸ ತಿಳಿದಿದೆಯೇ? ಸಿಖ್ಖರು ಯಾರು ಮತ್ತು ನಿಮ್ಮ ಸಮಾಜ, ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಉಳಿಸಲು ಅವರು ಏನು ಮಾಡಿದ್ದಾರೆ? ನಿಮ್ಮ ಪೂರ್ವಜರನ್ನು ಕೇಳಿ.
ಸಿಖ್ಖರು 12 ಗಂಟೆ ಸಮಯದಲ್ಲಿ ಮೊಘಲರ ವಿರುದ್ಧ ದಾಳಿ ಮಾಡಿ ನಿಮ್ಮ ತಾಯಿ ಮತ್ತು ಸಹೋದರಿಯರನ್ನು ರಕ್ಷಿಸಿದ್ದರು. ಆದ್ದರಿಂದ ನಿಮ್ಮ ಅಸಂಬದ್ಧತೆ ಮಾತುಗಳನ್ನು ನಿಲ್ಲಿಸಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಮತ್ತೆ ಪ್ರಯತ್ನಿಸಬೇಡ
ಕಮ್ರಾನ್ ಅಕ್ಮಲ್ ಅವರು ಕ್ಷಮೆಯಾಚನೆಗೆ ಸಂಬಂಧಿಸಿದಂತೆ ಹರ್ಭಜನ್ ಪ್ರತಿಕ್ರಿಯಿಸಿದ್ದಾರೆ. ಅಕ್ಮಲ್ ಕ್ಷಮೆಯಾಚಿಸಿರುವುದು ಒಳ್ಳೆಯದು. ಅವರು ಬೇಗನೆ ಅರ್ಥಮಾಡಿಕೊಂಡರು, ಆದರೆ ಅವರು ಎಂದಿಗೂ ಸಿಖ್ ಅಥವಾ ಯಾವುದೇ ಧರ್ಮವನ್ನು ನೋಯಿಸಲು ಪ್ರಯತ್ನಿಸಬಾರದು.
ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಅದು ಹಿಂದೂ, ಇಸ್ಲಾಂ, ಸಿಖ್ ಅಥವಾ ಕ್ರಿಶ್ಚಿಯನ್ ಧರ್ಮ ಆಗಿರಬಹುದು. ಒಬ್ಬರಿಗೊಬ್ಬರು ಧರ್ಮವನ್ನು ಗೌರವಿಸುವುದು ಹೇಗೆ ಎಂದು ನಮಗೆಲ್ಲರಿಗೂ ತಿಳಿದಿದ್ದರೆ, ಈ ಎಲ್ಲಾ ಸಮಸ್ಯೆಗಳು ಯಾರನ್ನೂ ಪ್ರಚೋದಿಸುವ ಅಗತ್ಯವಿಲ್ಲ. ಯಾರಿಗೂ ಬೆಂಕಿ ಹಚ್ಚುವ ಅಗತ್ಯವಿಲ್ಲ ಎಂದು ಅಕ್ಮಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿವಾದ ಹುಟ್ಟಿಕೊಂಡಿದ್ದು ಹೇಗೆ?
ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ARY ನ್ಯೂಸ್ನಲ್ಲಿ ಮಾತನಾಡಿದ ಅಕ್ಮಲ್, ' ಕೊನೆಯ ಓವರ್ನನ್ನು ಆರ್ಷದೀಪ್ ಸಿಂಗ್ ಬೌಲ್ ಮಾಡಬೇಕು. ಅವರ ಲಯವು ಕಾಣಿಸುತ್ತಿಲ್ಲ. ಆದರೆ ಏನು ಬೇಕಾದರೂ ಆಹಬಹುದು. ಇದು 12 ಗಂಟೆ ಸಯಮ ಎನ್ನುತ್ತಾ ಅಕ್ಮಲ್ ನಗಲು ಶುರು ಮಾಡಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕರು ಕೊನೆ ಓವರ್ನಲ್ಲಿ 16-17 ರನ್ಗಳು ಕಷ್ಟಕರವಾಗಬಹುದು ಎಂದು ಹೇಳಿದ್ದರು. ಈ ಬಗ್ಗೆ ಅಕ್ಮಲ್ ನಗುತ್ತಾ, '12 ಗಂಟೆಯ ನಂತರ ಯಾವುದೇ ಸಿಖ್ಗೆ ಓವರ್ ನೀಡಬಾರದು ಎಂದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.