
ನವದೆಹಲಿ: ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ಗಳಾದ ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಸಹೋದರರು ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಇಬ್ಬರೂ 200 ಆಮ್ಲನಕದ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದರಿಂದ ಕ್ರಿಕೆಟ್ನ ಪ್ರಮುಖ ಆಟಗಾರರು ನೆರವಿನ ಹಸ್ತ ಚಾಚುತ್ತಿದ್ದಾರೆ. ಪ್ಯಾಟ್ ಕಮಿನ್ಸ್, ನಿಕೋಲಸ್ ಪೂರನ್, ಸಚಿನ್ ತೆಂಡೂಲ್ಕರ್ ಮೊದಲಾದವರು ಈ ಮೊದಲು ನೆರವು ನೀಡಿದ್ದರು. ಈಗ ಪಾಂಡ್ಯ ಸಹೋದರರು ಕೂಡ ಸಹಾಯ ನೀಡಿದ್ದಾರೆ.
ಭಾರತದ ಗ್ರಾಮೀಣ ಭಾಗದಲ್ಲಿನ ಕೊರೊನಾ ಪೀಡಿತರ ನೆರವಿಗಾಗಿ ಕೃನಾಲ್ ಮತ್ತು ಹಾರ್ದಿಕ್ ಇಬ್ಬರೂ 200 ಆಕ್ಸಿಜನ್ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪಾಂಡ್ಯ ಕುಟುಂಬಸ್ಥರು ಸೇರಿ ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ ನೀಡಲು ನಿರ್ಧಾರ ತಾಳಿದ್ದರು.
'ನಮಗೆಲ್ಲ ಈ ಕಷ್ಟದ ಸಂದರ್ಭ ಅರ್ಥವಾಗುತ್ತದೆ. ಕೊರೊನಾ ವಿರುದ್ಧ ಮುಂದೆ ನಿಂತು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಮುಂಚೂಣಿಯಲ್ಲಿರುವವರಿಗೆಲ್ಲಾ ನಮ್ಮ ನಮನಗಳು. ಅವರ ಹೋರಾಟಕ್ಕೆ ನಾವೂ ಕೈ ಸೇರಿಸುತ್ತಿದ್ದೇವೆ,' ಎಂದು ಹಾರ್ದಿಕ್ ಹೇಳಿದ್ದಾರೆ.