
ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಮತ್ತೊಮ್ಮೆ ರಣಜಿ ಟ್ರೋಫಿಯಲ್ಲಿ ಆಡುತ್ತಿಲ್ಲ. ಪಾಂಡ್ಯ ಅಧಿಕೃತವಾಗಿ ರಣಜಿ ಟ್ರೋಫಿಯಿಂದ ಹೊರನಡೆದಿದ್ದಾರೆ. ಮುಂಬರುವ ಐಪಿಎಲ್ 2022ರ ಹಿನ್ನೆಲೆಯಲ್ಲಿ ಪಾಂಡ್ಯ ಈ ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಹಾರ್ದಿಕ್ ಪಾಂಡ್ಯ ಈ ಕ್ರಮಕ್ಕೆ ತೀವ್ರ ಟೀಕೆ ಕೇಳಿಬಂದಿದೆ.
ಗಾಯಾಳುವಾಗಿರುವ ಪಾಂಡ್ಯ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದು, ಕಳೆದ ಐಪಿಎಲ್ ಹಾಗೂ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಮುಂಬರುವ ಐಪಿಎಲ್ನಲ್ಲಿ ಮಿಂಚು ಹರಿಸಿ ಟೀಂ ಇಂಡಿಯಾ ಸೀಮಿತ ಓವರ್ಗಳ ತಂಡಕ್ಕೆ ಮರು ಪ್ರವೇಶ ಮಾಡುವ ನಿರೀಕ್ಷೆಯನ್ನ ಹೊಂದಿದ್ದಾರೆ.
ಆದ್ರೆ ಐಪಿಎಲ್ ದೃಷ್ಟಿಯಿಂದ ದೇಶೀಯ ಪ್ರತಿಷ್ಠಿತ ಟೂರ್ನಿ ರಣಜಿ ಟ್ರೋಫಿಯನ್ನ ತಿರಸ್ಕರಿಸಿವುದು ಎಷ್ಟು ಸರಿ ಎಂದು ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಬರೋಡಾ ಮೂಲದ ಆಲ್ರೌಂಡರ್ ಅನ್ನು ಟೀಕಿಸಿದ್ದಾರೆ.
ಕಳೆದ ವಾರ ಗಂಗೂಲಿ ಹಾರ್ದಿಕ್ ಅವರ ಫಿಟ್ನೆಸ್ ಬಗ್ಗೆ ಮಾತನಾಡಿದ್ದರು. ಐಪಿಎಲ್ಗೂ ಮುನ್ನ ಹಾರ್ದಿಕ್ ರಣಜಿ ಟ್ರೋಫಿಯಲ್ಲಿ ಬರೋಡಾ ಪರ ಕೆಲವು ಪಂದ್ಯಗಳಲ್ಲಿ ಆಡುವ ಭರವಸೆ ಇದೆ ಎಂದರು. ಆದ್ರೆ ದಾದಾ ನಂಬಿಕೆಯನ್ನ ಪಾಂಡ್ಯ ಹುಸಿಗೊಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದಾರೆ. ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಅವರಿಗೆ ವಿರಾಮ ನೀಡಲಾಯಿತು. ಆಗ ಮಾತ್ರ ಹಾರ್ದಿಕ್ ಭಾರತೀಯ ಕ್ರಿಕೆಟ್ ಗೆ ದೀರ್ಘಾವಧಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಅವರು ರಣಜಿ ಟ್ರೋಫಿಯಲ್ಲಿ ಆಡುವುದನ್ನು ನಾವು ಮತ್ತೆ ಮೈದಾನದಲ್ಲಿ ನೋಡಬಹುದು ಎಂದು ನಾನು ನಂಬುತ್ತೇನೆ. ಹಾರ್ದಿಕ್ ಹೆಚ್ಚಿನ ಓವರ್ಗಳನ್ನು ಬೌಲ್ ಮಾಡುತ್ತಾರೆ ಮತ್ತು ಅವರ ದೇಹವು ಬಲವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸೌರವ್ ಗಂಗೂಲಿ ಪಿಟಿಐಗೆ ತಿಳಿಸಿದ್ದರು.
ಗಂಗೂಲಿ ಹೇಳಿದ ನಂತರ ಹಾರ್ದಿಕ್ ಪಾಂಡ್ಯರನ್ನು ರಣಜಿ ಟ್ರೋಫಿಯಲ್ಲಿ ಕಾಣಬಹುದು ಎಂದು ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಹಾರ್ದಿಕ್ ರಣಜಿ ಟ್ರೋಫಿಯಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದಾಗ ಅವರ ಭರವಸೆ ಹುಸಿಯಾಯಿತು. ಭಾರತದ ವೈಟ್ ಬಾಲ್ ತಂಡಕ್ಕೆ ಮರಳುವತ್ತ ಗಮನ ಹರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಂದು ಪಾಂಡ್ಯ ಭಾವಿಸಿದ್ದಾರೆ.
ಬಹುಕೋಟಿ ಐಪಿಎಲ್ನಲ್ಲಿ ಆಡುವ ಉದ್ದೇಶದಿಂದ ದೇಶದ ಪ್ರಮುಖ ದೇಶೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು ತ್ಯಜಿಸಲು ಹಾರ್ದಿಕ್ ಪಾಂಡ್ಯ ನಿರ್ಧರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅವರು ಐಪಿಎಲ್ನ ಹೊಸ ಋತುವಿನಲ್ಲಿ ಅಹಮದಾಬಾದ್ ಫ್ರಾಂಚೈಸಿಯ ನಾಯಕರಾಗಿದ್ದಾರೆ. ಹಾರ್ದಿಕ್ ಅವರನ್ನು ಅಹಮದಾಬಾದ್ 15 ಕೋಟಿ ರೂ. ನೀಡಿ ಖರೀದಿಸಿದೆ.
ಇಡೀ ವರ್ಷ ಭಾರತ ಪರ ಆಡಿದರೆ ಹಾರ್ದಿಕ್ ಪಾಂಡ್ಯ 5 ಕೋಟಿ ರೂ. ಗಳಿಸುತ್ತಾರೆ. ಆದ್ರೆ ಅದೇ ಹಾರ್ದಿಕ್ ಪಾಂಡ್ಯ ಎರಡು ತಿಂಗಳ ಕಾಲ ಐಪಿಎಲ್ನಲ್ಲಿ ಆಡಿದರೆ 15 ಕೋಟಿ ರೂಪಾಯಿ ಪಡೆಯುವುದಾಗಿ ವ್ಯತ್ಯಾಸದ ಕುರಿತು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.