Harsha Bhogle: ಕೊಲಂಬೊದಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ ಗುಂಪು ಹಂತದ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇವೆರಡು ತಂಡಗಳು ಮುಖಾಮುಖಿಗೆ ಕೆಲವೇ ಕ್ಷಣಗಳು ಮಾತ್ರ ಬಾಕಿಯಿದ್ದು, ಇದಕ್ಕೂ ಮುನ್ನ ಭಾರತೀಯ ಪ್ರಸಿದ್ಧ ನಿರೂಪಕ ಹರ್ಷ ಭೋಗ್ಲೆ ಅವರು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
"ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ಈಗ ಹಿಂದಿನಂತೆ ಉತ್ಸಾಹವಿಲ್ಲ. ಏಕೆಂದರೆ ಇಂತಹ ಪಂದ್ಯಗಳು ಈಗ ಮೈದಾನದೊಳಗಿನ ಆಟಕ್ಕಿಂತಲೂ ಹೆಚ್ಚು ರಾಜಕೀಯ ಹಾಗೂ ವ್ಯಾಪಾರ ಅಂಶಗಳಿಗೆ ಸಂಬಂಧಿಸಿದಂತಾಗಿವೆ," ಎಂದು ಅವರು ಹೇಳಿದ್ದಾರೆ.

"ಇದು ಹೇಳುವುದು ಸರಿಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ, ಸತ್ಯವೇನೆಂದರೆ ಈಗಿನ ಭಾರತ-ಪಾಕಿಸ್ತಾನ ಪಂದ್ಯ ನನಗೆ ಹಿಂದಿನಂತೆ ಉತ್ಸಾಹ ಕೊಡುತ್ತಿಲ್ಲ. ನೀವು ಅಚ್ಚರಿ ಪಡಬಹುದು. ನಾನು ಇಂತಹ ಅನೇಕ ಪಂದ್ಯಗಳನ್ನು ನೋಡಿದ್ದೇನೆ. ಆಗ ಯಾವಾಗಲೂ ಒಂದು ಆತಂಕ ಇರುತ್ತಿತ್ತು. ಏನಾಗಬಹುದು ಎಂಬ ಕುತೂಹಲ ಹೆಚ್ಚಾಗಿರುತ್ತಿತ್ತು. ಪ್ರತಿ ಬಾಲ್ಗೂ ಸಂಭ್ರಮಿಸುತ್ತಿದ್ದೆವು, ಮತ್ತೆ ಕೆಲವೊಮ್ಮೆ ತುಂಬಾ ಬೇಸರವಾಗುತ್ತಿತ್ತು," ಎಂದು ಅವರು ಹೇಳಿದ್ದಾರೆ.
"ಈ ಬಾರಿ ಮಾತ್ರ ಪರಿಸ್ಥಿತಿ ವಿಭಿನ್ನವಾಗಿದೆ. ಕ್ರಿಕೆಟ್ ಅತೀ ಹೆಚ್ಚು ಜನರು ಪ್ರೀತಿಸುವ ಆಟಗಳಲ್ಲಿ ಒಂದಾಗಿದೆ. ಆದರೆ, ಈಗ ಕ್ರಿಕೆಟ್ ವ್ಯಾವಹಾರ ಮತ್ತು ರಾಜಕೀಯ ಉದ್ದೇಶಗಳಿಗೆ ಬಂಧಿಯಾಗಿರುವಂತೆ ನನಗೆ ಅನಿಸುತ್ತಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಕ್ರಿಕೆಟ್ ಈಗ ರಾಜಕೀಯಕ್ಕಾಗಿ ಹಾರಿಸುವ ಬಾಣದಂತಾಗಿದೆ. ಪ್ರಚೋದನಾತ್ಮಕ ಪ್ರೊಮೊಗಳನ್ನು ಮಾಡಲಾಗುತ್ತಿದ್ದು, ಯುದ್ಧದಂತೆ ಬಿಂಬಿಸುತ್ತಿದ್ದಾರೆ. ಇದು ಈಗ ರಾಜಕೀಯ ಹಾಗೂ ವ್ಯಾಪಾರವಾಗಿ ಮಾರ್ಪಡುತ್ತಿದೆ. ನನಗೆ ಅನಿಸುವುದೇನೆಂದರೆ, ನಾವು ಈಗ ಆಟವನ್ನು ಆನಂದಿಸುವುದೇ ಇಲ್ಲ. ಇಂದಿನ ಭಾರತ - ಪಾಕಿಸ್ತಾನ ಪಂದ್ಯಗಳ ವಾಸ್ತವಿಕತೆ ಇದೇ. ಈ ಆಟವನ್ನು ಅಷ್ಟೊಂದು ಪ್ರೀತಿಸುತ್ತಿದ್ದರೆ, ಅದನ್ನು ಕ್ರಿಕೆಟ್ ಆಟವಾಗಿ ನೋಡುತ್ತಾ ಮುಂದಕ್ಕೆ ಸಾಗಬೇಕು," ಎಂದು ಹರ್ಷ ಭೋಗ್ಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಈ ಪಂದ್ಯದಲ್ಲಿ ಎರಡೂ ತಂಡಗಳ ಮೇಲೆ ಒಂದೇ ರೀತಿಯ ಒತ್ತಡ ಇರುವುದಿಲ್ಲ. ಈ ಪಂದ್ಯಕ್ಕೆ ಸಂಬಂಧಿಸಿದಂತೆ ನಡೆದಿರುವ ರಾಜಕೀಯ ಬೆಳವಣಿಗೆಗಳ ಕಾರಣದಿಂದ ಪಾಕಿಸ್ತಾನ ತಂಡ ಹೆಚ್ಚು ಒತ್ತಡದೊಂದಿಗೆ ಮೈದಾನಕ್ಕಿಳಿಯಲಿದೆ ಎಂದು ಹೇಳಿದ್ದಾರೆ. ಆದರೆ, ಮತ್ತೊಂದೆಡೆ ಭಾರತ ತಂಡ ಯಾವುದೇ ಒತ್ತಡ ಇಲ್ಲದೆ, ಸ್ವತಂತ್ರವಾಗಿ ಆಡುತ್ತಿರುವಂತೆ ಕಾಣುತ್ತಿದೆ," ಎಂದು ಹರ್ಷ ಅವರು ಭೋಗ್ಲೆ ಹೇಳಿದ್ದಾರೆ.
ಜೊತೆಗೆ, ಭಾರತದ ಇನಿಂಗ್ಸ್ ಪವರ್ಪ್ಲೇನಲ್ಲಿ ತಂಡ ಹೇಗೆ ಆರಂಭಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆರಂಭಿಕರಾಗಿ ಅಭಿಷೇಕ್ ಶರ್ಮಾ ಅವರು ಕಣಕ್ಕಿಳಿಯಲಿದ್ದು, ಅವರು ಕ್ರೀಸ್ನಲ್ಲಿ ಹೆಚ್ಚು ಸಮಯ ಇರಲಿದ್ದಾರೆ ಎಂದು ನಾನು ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದು ಹರ್ಷ ಭೋಗ್ಲೆ ಹೇಳಿದ್ದಾರೆ.
"ಒಂದು ವೇಳೆ ಅಭಿಷೇಕ್ ಶರ್ಮಾ ಬೇಗ ಔಟ್ ಆಗಿ ಕ್ರೀಸ್ನಿಂದ ಹೊರಬಂದರೆ, ಭಾರತಕ್ಕೆ ದೊಡ್ಡ ಆಘಾತ ಎದುರಾಗಲಿದೆ. ಇದೇ ಎದುರಾಳಿ ತಂಡದ ಸಂಭ್ರಮಕ್ಕೆ ದಾರಿ ಆಗುತ್ತದೆ. ಅಭಿಷೇಕ್ ಶರ್ಮಾ ಅವರು ಪವರ್ಪ್ಲೇ ಅಂತ್ಯದವರೆಗೆ ಕ್ರೀಸ್ನಲ್ಲಿದ್ದರೆ, ಉತ್ತಮ ರನ್ಗಳನ್ನು ಕಲೆಹಾಕುತ್ತಾರೆ. ಇದರಿಂದ ಮುಂಬರುವವರು ಯಾವುದೇ ಒತ್ತಡವಿಲ್ಲದೆ, ಹೆಚ್ಚು ರನ್ಗಳನ್ನು ಕಲೆಹಾಕಲು ಅನುಕೂಲವಾಗಲಿದೆ. ಒಂದು ವೇಳೆ ಅಭಿಷೇಕ್ ಶರ್ಮಾ ಬೇಗ ಔಟಾದರೆ, ಪಂದ್ಯ ಸಂಪೂರ್ಣವಾಗಿ ಬೇರೆಯ ದಿಕ್ಕಿಗೆ ತಿರುಗುವ ಸಾಧ್ಯತೆ ಇರುತ್ತದೆ," ಎಂದು ಹರ್ಷ ಭೋಗ್ಲೆ ಅವರು ಭವಿಷ್ಯ ನುಡಿದಿದ್ದಾರೆ.