
ಹೊಸ ನಾಯಕ ರೋಹಿತ್ ಶರ್ಮಾ ಮತ್ತು ಹೊಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನ ಅಡಿಯಲ್ಲಿ ಟೀಂ ಇಂಡಿಯಾ ಟಿ20 ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ರಾಹುಲ್ ದ್ರಾವಿಡ್ ತಮ್ಮ ಮೊದಲ ನಿಯೋಜನೆಯಲ್ಲೇ ಯಶಸ್ಸು ಸಾಧಿಸಿದ್ದಾರೆ. ಆದ್ರೆ ಇದರ ಹಿಂದೆ ಇಡೀ ಸಹಾಯಕ ಸಿಬ್ಬಂದಿಯ ಕೊಡುಗೆ ಕೂಡ ಸಾಕಷ್ಟಿದೆ.
ಒಂದು ತಂಡವು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದಾದ್ರೆ, ಅದು ಕೇವಲ ಆಟಗಾರರ ಕಠಿಣ ಪರಿಶ್ರಮದ ಫಲಿತಾಂಶವಷ್ಟೇ ಆಗಿರಲ್ಲ. ತಂಡದ ಕೋಚ್, ಸಹಾಯ ಸಿಬ್ಬಂದಿಯ ಪಾತ್ರವು ಇರಲಿದೆ. ಮುಖ್ಯ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಹಾಗೂ ಬ್ಯಾಟಿಂಗ್ ಕೋಚ್ ಮಾರ್ಗದರ್ಶನ ಆಟಗಾರರಿಗೆ ಅತ್ಯಮೂಲ್ಯವಾಗಿರುತ್ತದೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನ ವೈಟ್ವಾಶ್ ಮಾಡಿತು. ಬ್ಯಾಟಿಂಗ್ ಅಷ್ಟೇ ಅಲ್ಲದೆ ಚುರುಕು ಫೀಲ್ಡಿಂಗ್ ಮೂಲಕ ಗಮನಸೆಳೆಯಿತು. ಅದ್ರಲ್ಲೂ ಪ್ರಮುಖವಾಗಿ ಇಶನ್ ಕಿಶನ್ , ಎದುರಾಳಿ ತಂಡದ ನಾಯಕ ಮಿಂಚೆಲ್ ಸ್ಯಾಂಟ್ನರ್ರನ್ನ ಅದ್ಭುತವಾಗಿ ರನೌಟ್ ಮಾಡಿದ್ದು ಎಲ್ಲರ ಗಮನಸೆಳೆಯಿತು.
ಟೀಂ ಇಂಡಿಯಾ ನೀಡಿದ 185ರನ್ಗಳ ಗುರಿಯನ್ನ ಬೆನ್ನಟ್ಟಿದ ನ್ಯೂಜಿಲೆಂಡ್, ಭಾರತದ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೇವಲ 17.2 ಓವರ್ಗಳಲ್ಲೇ 111 ರನ್ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ ಹೀನಾಯ ಸೋಲನ್ನ ಕಂಡಿತು. ಈ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ರನೌಟ್ ಕೂಡ ಹೈಲೈಟ್ ಆಗಿದೆ. ಮೂರನೇ ಪಂದ್ಯದಲ್ಲಿ ಭಾರತದ ಪರ ಆಡುವ ಅವಕಾಶ ಪಡೆದಿದ್ದ ಇಶನ್ ಕಿಶನ್ ಬ್ಯಾಟಿಂಗ್ನಲ್ಲಿ ಹೆಚ್ಚು ಮಿಂಚಲಿಲ್ಲ. ಆದ್ರೆ ಫೀಲ್ಡಿಂಗ್ನಲ್ಲಿ ಅದ್ಭುತ ರನೌಟ್ ಮಾಡಿದ್ರು.
ಇಶನ್ ಕಿಶನ್, ಮಿಚೆಲ್ ಸ್ಯಾಂಟ್ನರ್ರನ್ನ ಡೈರೆಕ್ಟ್ ಥ್ರೋ ಮೂಲಕ ರನೌಟ್ ಮಾಡಿದ್ದು ಕೋಚ್ ರಾಹುಲ್ ದ್ರಾವಿಡ್ರನ್ನ ಸಾಕಷ್ಟು ಖುಷಿಪಡಿಸಿತು. ಹೀಗಾಗಿಯೇ ತಮ್ಮ ಪಕ್ಕದಲ್ಲಿಯೇ ಇದ್ದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ರನ್ನ ಬೆನ್ನು ತಟ್ಟುವ ಮೂಲಕ ಪ್ರಶಂಸಿದರು.
ಟಿ20 ಸರಣಿಯನ್ನು ಅಮೋಘವಾಗಿ ಜಯಿಸಿದ ಟೀಂ ಇಂಡಿಯಾ, ಟೆಸ್ಟ್ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಎರಡು ಟೆಸ್ಟ್ ಪಂದ್ಯಗಳು ಕ್ರಮವಾಗಿ ನವೆಂಬರ್ 25 ಮತ್ತು ಡಿಸೆಂಬರ್ 3 ರಿಂದ ಕಾನ್ಪುರ ಮತ್ತು ಮುಂಬೈನಲ್ಲಿ ನಡೆಯಲಿವೆ. 2016ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ನೇತೃತ್ವದ ತಂಡ ಕಿವೀಸ್ ಪಡೆಯನ್ನ 3-0 ಅಂತರದಲ್ಲಿ ವೈಟ್ವಾಶ್ ಮಾಡಿತ್ತು. ಆರಂಭಿಕ ಟೆಸ್ಟ್ ಪಂದ್ಯದಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, 2ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.