ನವದೆಹಲಿ, ಜು, 02: ಅದು 1998ರ ಇಂಡಿಪೆಂಡೆನ್ಸ್ ಕಪ್ ಫೈನಲ್ ಪಂದ್ಯ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಪಾಕಿಸ್ತಾನ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸುತ್ತಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 314 ಗಳ ಬೃಹತ್ ಮೊತ್ತ ಪೇರಿಸಿತ್ತು.
ಭಾರತಕ್ಕೆ ಕೊನೆಯ 8 ಎಸೆತಗಳಲ್ಲಿ ಬೇಕಾಗಿದ್ದದ್ದು 10 ರನ್. ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದ್ದ ಭಾರತ ಗೆಲುವಿನ ಆಸೆಯನ್ನು ಕೈ ಬಿಟ್ಟಿತ್ತು. ಒಂದೆಡೆ ಕ್ರೀಸ್ ನಲ್ಲಿದ್ದ ನಯನ್ ಮೋಂಗಿಯಾ ಸಹ ರನೌಟ್ ಆಗಿ ಫೆವಿಲಿಯನ್ ಸೇರಿಕೊಂಡರು. ಕೊನೆಯ ಓವರ್ ನಲ್ಲಿ ಭಾರತಕ್ಕೆ ಬೇಕಾಗಿದ್ದದ್ದು 9 ರನ್. ಸ್ಪಿನ್ ಮಾಂತ್ರಿಕ ಸಕ್ಲೇನ್ ಮುಸ್ತಾಕ್ ಮೊದಲ ಓವರ್ ಎಸೆಯಲು ಸಿದ್ಧರಾಗಿದ್ದರು.[ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]

ಭಾರತದ ಪರ ಕ್ರೀಸ್ ನಲ್ಲಿ ಇದ್ದವರು ಹೃಷಿಕೇಶ್ ಕಾನಿಟ್ಕರ್ ಮತ್ತು ಜಾವಗಲ್ ಶ್ರೀನಾಥ್, ಮೊದಲ ಎಸೆತ ಎದುರಿಸಿದ ಕಾನಿಟ್ಕರ್ 1 ರನ್ ತೆಗೆದುಕೊಂಡಿದ್ದರು. ಎರಡನೇ ಎಸೆತದಲ್ಲಿ ಶ್ರೀನಾಥ್ 2 ರನ್ ತೆಗೆದುಕೊಂಡರು. ಮೂರನೇ ಎಸೆತಕ್ಕೆ ಸಿಕ್ಕಿದ್ದು ಮತ್ತೆ ಎರಡು ರನ್. ನಾಲ್ಕನೇ ಎಸೆತದಲ್ಲಿ ಮತ್ತೆ ಶ್ರೀನಾಥ್ ಒಂದು ರನ್ ಕಬಳಿಸಿದರು.
ಎರಡು ಚೆಂಡುಗಳಲ್ಲಿ ಭಾರತಕ್ಕೆ 3 ರನ್ ಬೇಕಾಗಿತ್ತು. ಕ್ರೀಸ್ ನಲ್ಲಿದದ್ದ ಕಾನಿಟ್ಕರ್ 5 ನೇ ಚೆಂಡನ್ನು ಬೌಂಡರಿಯಿಂದ ಹೊರಕ್ಕೆ ಕಳಿಸಿದ್ದರು. ಭಾರತ ವಿಜಯಮಾಲೆ ಧರಿಸಿತ್ತು. ಢಾಕಾದಲ್ಲಿ ನಡೆದ ಪಂದ್ಯ ಅಂದಿನ ಮಟ್ಟಿಗೆ ಅತಿಹೆಚ್ಚು ರನ್ ಚೇಸ್ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು.
ಇಂಥ ಜಯವನ್ನು ಭಾರತಕ್ಕೆ ತಂದುಕೊಟ್ಟ ಹೃಷಿಕೇಶ್ ಕಾನಿಟ್ಕರ್ ಜುಲೈ 1 ರಂದು ಎಲ್ಲ ಬಗೆಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ. ಭಾರತದ ಪರ ಕಾನಿಟ್ಕರ್ 2 ಟೆಸ್ಟ್ ಮತ್ತು 34 ಏಕದಿನ ಪಂದ್ಯ ಆಡಿದ್ದಾರೆ.
ಕಾನಿಟ್ಕರ್ 2013 ರಲ್ಲಿ ರಾಜಸ್ಥಾನದ ಪರ ಪ್ರಥಮದರ್ಜೆ ಪಂದ್ಯ ಆಡಿದ್ದರು. ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಹಿನ್ನಲೆಯಲ್ಲಿ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ. ನನ್ನಿಂದ ಕ್ಷೇತ್ರ ರಕ್ಷಣೆಯೂ ಸಾಧ್ಯವಾಗುತ್ತಿರಲಿಲ್ಲ ಎಂದು 34 ವರ್ಷದ ಎಡಗೈ ದಾಂಡಿಗ ಮಾಧ್ಯಮಗಳಿಗೆ ತಿಳಿಸಿದ್ದಾರೆ.