
ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಆರಂಭಿಕ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಸೋಲಿನ ಬಳಿಕ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅದ್ರಲ್ಲೂ ವಿರಾಟ್ ಕೊಹ್ಲಿ ಮಗಳಿಗೆ ಆನ್ಲೈನ್ನಲ್ಲಿ ಅತ್ಯಾಚಾರದ ಬೆದರಿಕೆಯನ್ನು ಒಡ್ಡಿದ್ದ ಯುವಕನನ್ನು ಬಂಧಿಸುವಲ್ಲಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈದ್ರಾಬಾದ್ನಲ್ಲಿ ನೆಲೆಸಿದ್ದ 23 ವರ್ಷದ ರಾಮನಾಗೇಶ್ ಅಲಿಬತಿನಿ ಎಂಬ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನನ್ನ ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಪುತ್ರಿ ಕುರಿತಾಗಿ ಅಶ್ಲೀಲವಾಗಿ ಮಾತನಾಡಿದ್ದ ಈತ, ಅತ್ಯಾಚಾರದ ಬೆದರಿಕೆಯೊಡ್ಡಿದ್ದ. ಈ ಕುರಿತಾಗಿ ದೆಹಲಿಯ ಮಹಿಳಾ ಆಯೋಗವು ಪೊಲೀಸ್ ಕಮೀಷನರ್ಗೆ ನೋಟಿಸ್ ನೀಡಿತ್ತು. ಈ ಪ್ರಕರಣದ ಬೆನ್ನತ್ತಿ ಹೋದ ಮುಂಬೈ ಸೈಬರ್ ಪೊಲೀಸರು ಕೊನೆಗೂ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧನಕ್ಕೆ ಒಳಗಾಗಿರುವ ರಾಮನಾಗೇಶ್ ಅಲಿಬತಿನಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಫುಡ್ ಡೆಲಿವರಿ ಆ್ಯಪ್ಗಾಗಿ ಕೆಲಸ ಮಾಡುತ್ತಿದ್ದನು.
ಅಕ್ಟೋಬರ್ 24ರಂದು ಭಾರತದ ಮೊದಲ ಪಂದ್ಯವು ಪಾಕಿಸ್ತಾನ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಎದುರು ಪಾಕಿಸ್ತಾನ 10 ವಿಕೆಟ್ಗಳ ಐತಿಹಾಸಿಕ ಗೆಲುವನ್ನು ಸಾಧಿಸಿತು. ಈ ಮೂಲಕ ಐಸಿಸಿ ಟೂರ್ನಮೆಂಟ್ನಲ್ಲಿ ಪಾಕ್ ವಿರುದ್ಧ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತು.
ಪಾಕ್ ವಿರುದ್ಧ ಹೀನಾಯ ಸೋಲಿನ ಬಳಿಕ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಯಿತು. ಟೀಮ್ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕಿಡಿಗೇಡಿಗಳು ಕೋಮದ್ವೇಷದ ಬೀಜ ಬಿತ್ತಿದರು. ಭಾರತದ ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ಟೀಕಿಸಿದ್ರು. ಈ ಕುರಿತಾಗಿ ಶಮಿ ಬೆಂಬಲಕ್ಕೆ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ನಿಂತ್ರು. ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಕೂಡ ಶಮಿ ವಿರುದ್ಧ ಕೋಮು ದಾಳಿ ಕುರಿತಾಗಿ ಖಂಡಿಸಿದ್ರು.
ಕೊಹ್ಲಿ ಯಾವಾಗ ಪತ್ರಿಕಾಗೋಷ್ಠಿಯಲ್ಲಿ ಶಮಿ ವಿರುದ್ದದ ಕೋಮು ನಿಂದನೆಯನ್ನು ಖಂಡಿಸಿದ್ರೋ, ಆಗ ಕೊಹ್ಲಿ ವಿರುದ್ಧ ತಿರುಗಿಕೊಂಡ್ರು. '' ಒಂದು ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯುಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು'' ಎಂದು ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಹೇಳಿದರು.
ಇದರ ಜೊತೆಗೆ ಶಮಿ ವಿರುದ್ಧ ಈ ರೀತಿಯಾದ ಟೀಕೆಗಳನ್ನು ಸಹಿಸುವುದಿಲ್ಲ. ಶಮಿ ಪರ ಶೇಕಡಾ 200ರಷ್ಟು ನಿಲ್ಲುತ್ತೇನೆ. ಆತ ಭಾರತಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾನೆ ಎಂದು ಖಡಕ್ ಆಗಿಯೇ ಉತ್ತರ ನೀಡಿದ್ರು.
ಇದಾದ ಬಳಿಕ ವಿಕೃತ ಮನಸ್ಸಿನ ಜನರು ಕೊಹ್ಲಿ ವಿರುದ್ಧ ತಿರುಗಿಬಿದ್ರು. ಅಷ್ಟೇ ಅಲ್ಲದೆ ಕೊಹ್ಲಿಯ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗುವ ಬೆದರಿಕೆಯೊಡ್ಡಿದರು. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ದೇಶಾದ್ಯಂತ ಈ ಟ್ವೀಟ್ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ, ಈ ಕುರಿತು ದೆಹಲಿ ಮಹಿಳಾ ಆಯೋಗ ಪ್ರಕರಣವನ್ನು ಕೂಡ ದಾಖಲಿಸಿತು.
ಈ ಕುರಿತಾಗಿ ಕೇಸ್ ದಾಖಲಿಸಿಕೊಂಡು ಆರೋಪಿ ಬೆನ್ನತ್ತಿದ ಮುಂಬೈ ಸೈಬರ್ ಸೆಲ್ ಪೊಲೀಸರು ವ್ಯಕ್ತಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಸಾಮಾಜಿಕ ಮಾಧ್ಯಮದಿಂದ ಮಗಳನ್ನು ದೂರ ಇಡುವ ಪ್ರಯತ್ನ ನಡೆಸುತ್ತಿದ್ದು, ಇದುವರೆಗೂ ಮಗಳ ಮುಖವನ್ನು ಎಲ್ಲಿಯೂ ಕೂಡ ತೋರಿಸಿಲ್ಲ.