
ಟೀಂ ಇಂಡಿಯಾ ಸ್ಫೋಟಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಂಕಾಗಿದ್ದನ್ನ ನಾವು ಕಂಡಿದ್ದೇವೆ. ಅದ್ರಲ್ಲೂ ಆಲ್ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಪಾಂಡ್ಯ ಕಳೆದ ಐಪಿಎಲ್ ಸೀಸನ್ನಲ್ಲಿ ಒಂದೇ ಒಂದು ಎಸೆತವನ್ನು ಬೌಲಿಂಗ್ ಮಾಡಿರಲಿಲ್ಲ. ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಅಲ್ಲೂ ಕೂಡ ಮಿಂಚುವಲ್ಲಿ ವಿಫಲಗೊಂಡಿದ್ದರು.
ಬ್ಯಾಟಿಂಗ್ನಲ್ಲಿ ಮಂಕಾಗಿರುವ, ಬೌಲಿಂಗ್ನಲ್ಲೂ ಸಂಪೂರ್ಣ ಲಯ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯರ ವೃತ್ತಿಜೀವನದ ಭವಿಷ್ಯ ಏನು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ನಿಯಮಿತವಾಗಿ ಬೌಲಿಂಗ್ ಮಾಡದ ಕಾರಣ ಅವರನ್ನು ಆಲ್ ರೌಂಡರ್ ಎಂದು ಪರಿಗಣಿಸಬಹುದೇ ಎಂದು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಇತ್ತೀಚೆಗೆ ಪ್ರಶ್ನಿಸಿದ್ದರು.
ಆದ್ರೀಗ ಬರೋಡಾ ಮೂಲದ ಆಲ್ರೌಂಡರ್ ಹಾರ್ದಿಕ್ ಐಪಿಎಲ್ 15ನೇ ಸೀಸನ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ. ಅಹಮದಾಬಾದ್ ತಂಡವನ್ನ ಮುನ್ನಡೆಸಲಿರುವ ಪಾಂಡ್ಯ ಮತ್ತೆ ಹಳೆಯ ಫಾರ್ಮ್ಗೆ ಮರಳಲು ಸಿದ್ದರಾಗಿದ್ದಾರೆ.
ಟಿ20 ವಿಶ್ವಕಪ್ ಬಳಿಕ ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡಿರುವ ಪಾಂಡ್ಯ ಬೆಂಗಳೂರಿನ ಎನ್ಸಿಎ ಪುನರ್ವಸತಿ ಕೇಂದ್ರದಲ್ಲಿ ಬೆವರು ಸುರಿಸಿ ಫಿಟ್ನೆಸ್ ಕಾಯ್ದುಕೊಂಡಿದ್ದು, ಅದ್ಭುತ ಕಂಬ್ಯಾಕ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪಾಂಡ್ಯ ಎಲ್ಲಾ ಮೂರು ವಿಭಾಗಗಳಲ್ಲಿ ಮೊದಲಿನಂತೆ ಮಿಂಚುವುದನ್ನ ನೋಡಲು ಬಯಸುತ್ತಾರೆ.
"ಹಾರ್ದಿಕ್ ಗಾಯಗೊಂಡಿದ್ದಾರೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ವಿರಾಮ ನೀಡಲಾಯಿತು, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಬಹುದು. ಅವರು ಕೆಲವು ರಣಜಿ ಟ್ರೋಫಿಯನ್ನು ಆಡಬಹುದು ಎಂದು ನಾನು ನಂಬುತ್ತೇನೆ, "ಎಂದು ಗಂಗೂಲಿ ಹೇಳಿದರು .
ಇದರ ಜೊತೆಗೆ ಪಾಂಡ್ಯ ಮುಂಬರುವ ದಿನಗಳಲ್ಲಿ ಇನ್ನಷ್ಟು ಬೌಲಿಂಗ್ ಮಾಡುವ ನಿರೀಕ್ಷೆಯಿದೆ ಎಂದು ಭಾರತದ ಮಾಜಿ ನಾಯಕ ಸೌರವ್ ಹೇಳಿದ್ದಾರೆ.
"ಅವರು ಹೆಚ್ಚಿನ ಓವರ್ಗಳನ್ನು ಬೌಲ್ ಮಾಡಲಿದ್ದಾರೆ ಮತ್ತು ಅವರ ದೇಹವು ಬಲಗೊಳ್ಳುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಅವರು ಈಗ ಐಪಿಎಲ್ನಲ್ಲಿ ಅಹಮದಾಬಾದ್ನ ನಾಯಕರಾಗಿದ್ದಾರೆ ಮತ್ತು ಅವರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಆಯ್ಕೆದಾರರು ಪರಿಶೀಲಿಸುವ ವೇದಿಕೆಯಾಗಿದೆ. ಅದರಂತೆ, ಆತ ಉತ್ತಮ ಆಟವಾಡುವ ನಿರೀಕ್ಷೆಯಿದೆ"ಎಂದು ಅವರು ಹೇಳಿದರು.
ಐಪಿಎಲ್ನಲ್ಲಿ 91 ಪಂದ್ಯಗಳಲ್ಲಿ 153.91 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯ 1476 ರನ್ ದಾಖಲಿಸಿದ್ದಾರೆ. ಅಹಮದಾಬಾದ್ ಫ್ರಾಂಚೈಸಿ ಇವರನ್ನ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.