
ದುಬೈ: ಭಾರತೀಯ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಈಚೆಗೆ ಹೆಚ್ಚು ಗಮನ ಸೆಳೆಯತೊಡಗಿದ್ದಾರೆ. ಯಾಕೆಂದರೆ ಸದ್ಯ ನಡೆಯುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯಾದವ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಹಿಂದಿನ ಪಂದ್ಯದಲ್ಲಿ ಯಾದವ್ ಸ್ಫೋಟಕ ಅರ್ಧ ಶತಕ ಬಾರಿಸಿದ್ದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಐಗೆ ಹೆಚ್ಚು ರನ್ ಕೊಡುಗೆ ನೀಡಿದ್ದು ಸೂರ್ಯಕುಮಾರ್ ಯಾದವ್ ಅವರೇ. ಯಾದವ್ 47 ಎಸೆತಗಳಲ್ಲಿ 79 ರನ್ ಬಾರಿಸಿದ್ದರು. ಇನ್ನು ಕ್ವಿಂಟನ್ ಡಿ ಕಾಕ್ 23, ರೋಹಿತ್ ಶರ್ಮಾ 35, ಹಾರ್ದಿಕ್ ಪಾಂಡ್ಯ 30 ರನ್ ಸೇರ್ಪಡೆಯೊಂದಿಗೆ ಮುಂಬೈ 193 ರನ್ ಕಲೆ ಹಾಕಿತ್ತು. ಪಂದ್ಯವನ್ನು 57 ರನ್ಗಳಿಂದ ಗೆದ್ದಿತ್ತು.
ಈವರೆಗೆ ಆಡಿದ ಬಹುತೇಕ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅತ್ಯಧಿಕ ರನ್ ಪಟ್ಟಿಯಲ್ಲಿ 180 ರನ್ನೊಂದಿಗೆ ಸದ್ಯ ಯಾದವ್ 7ನೇ ಸ್ಥಾನದಲ್ಲಿದ್ದಾರೆ. ದಿಟ್ಟ ಬ್ಯಾಟಿಂಗ್ ಬಗ್ಗೆ ಇತ್ತೀಚೆಗೆ ಸುದ್ದಿಗಾರರು ಮಾತನಾಡಿಸಿದಾಗ ಯಾದವ್, ಅಭಿ ನಹೀ ತೊ ಕಭೀ ನಹೀ (ಈಗ ಆಗದಿದ್ರೆ ಇನ್ಯಾವತ್ತೂ ಆಗಲ್ಲ) ಎಂದು ಆತ್ಮವಿಶ್ವಾಸದ ಉತ್ತರ ನೀಡಿದ್ದಾರೆ.
ಪ್ರತಿಕಾ ಸಂವಾದದಲ್ಲಿ ಮಾತನಾಡಿದ ಸೂರ್ಯಕುಮಾರ್ ತಾನು ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುತ್ತಿರುವುದಕ್ಕೆ ಕಾರಣ ನೀಡಿದ್ದಾರೆ. 'ನಾನು ರೋಹಿತ್ ಶರ್ಮಾ ಸಲಹೆಯನ್ನು ಕುರುಡಾಗಿ ನಂಬುತ್ತೇನೆ. ಪ್ರತೀ ಸಾರಿಯೂ ನಾನು ಅವರನ್ನು ಭೇಟಿಯಾಗುತ್ತೇನೆ, ಸಂವಹನ ನಡೆಸುತ್ತಿರುತ್ತೇನೆ. ಹೀಗಾಗಿ ನಾನು ಹೊಸದನ್ನು ಕಲಿಯುತ್ತಿದ್ದೇನೆ,' ಎಂದು ಯಾದವ್ ಹೇಳಿಕೊಂಡಿದ್ದಾರೆ.