ಕರಾಚಿ, ಅ.06: ಭಾರತದೊಂದಿಗೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ಆಡಲು ಪಾಕಿಸ್ತಾನ ಬಯಸುವುದಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಜ್ ಅಜೀಜ್ ಘೋಷಿಸಿದ್ದಾರೆ. ಹೀಗಾಗಿ ವರ್ಷಾಂತ್ಯಕ್ಕೆ ನಡೆಯಬೇಕಿದ್ದ ಬಹುನಿರೀಕ್ಷಿತ ಕ್ರೀಡಾ ಸಮರ ರದ್ದಾಗಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಭಾರತ ಮತ್ತು ಪಾಕ್ ನಡುವೆ ಸಂಬಂಧ ಗಟ್ಟಿಯಾಗಲು ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ಆಯೋಜಿಸಬೇಕೆಂಬುದು ಅಭಿಮಾನಿಗಳ ಒತ್ತಾಯವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಬಿಸಿಸಿಐ ಮುಂಬರುವ ಡಿಸೆಂಬರ್, ಜನವರಿಯಲ್ಲಿ ಏಕದಿನ ಪಂದ್ಯ ಆಯೋಜಿಸಲು ಮುಂದಾಗಿತ್ತು. ಅದರೆ, ಸುರಕ್ಷತಾ ದೃಷ್ಟಿ ಹಾಗೂ ಗಡಿ ಭಾಗದಲ್ಲಿನ ಉದ್ವಿಗ್ನತೆಯಿಂದ ಸರಣಿ ಬಗ್ಗೆ ಯಾವುದೇ ಸ್ಪಷ್ಟಣೆ ಸಿಕ್ಕಿರಲಿಲ್ಲ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತ ಮತ್ತು ಪಾಕ್ ನಡುವೆ ಟ್ವೆಂಟಿ-20 ಮೂರು ಪಂದ್ಯ ಹಾಗೂ 5 ಏಕದಿನ ಪಂದ್ಯ ಆಯೋಜಿಸಲು ಬಿಸಿಸಿಐ ದಿನಾಂಕ ನಿಗದಿಪಡಿಸಲು ಮುಂದಾಗಿತ್ತು. ಆದರೆ, ಭಾರತದೊಂದಿಗೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ಆಟವಾಡದಿರಲು ಪಾಕಿಸ್ತಾನ ತೀರ್ಮಾನಿಸಿದೆ.
2015-2023ರ ಅವಧಿಯಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಬೇಕೆಂಬುದು ಉದ್ದೇಶವಾಗಿತ್ತು. ಅಲ್ಲದೆ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವೆ ತ್ರಿಕೋನ ಸರಣಿ ಆಯೋಜಿಸುವ ಗುರಿ ಹೊಂದಲಾಗಿತ್ತು. ಆದರೆ, ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸುವ ಉದ್ದೇಶ ನಮಗಿಲ್ಲ ಎಂದು ಅಜೀಜ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷ ಶಶಾಂತ್ ಮನೋಹರ್ ಅವರು ಕೂಡಾ ಭಾರತ ಹಾಗೂ ಪಾಕಿಸ್ತಾನ ಸರಣಿ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. ಇದು ಬಿಸಿಸಿಐ ಹಾಗೂ ಪಿಸಿಬಿ ನಿರ್ಣಯ ತೆಗೆದುಕೊಳ್ಳುವ ವಿಚಾರವಲ್ಲ, ಉಭಯ ದೇಶಗಳ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದರು. ಒಟ್ಟಾರೆ, ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಯಾವಾಗೋ ನಡೆಯುವುದೋ ಸ್ಪಷ್ಟವಾಗಿ ಯಾರೋ ಹೇಳಲು ಸ್ಥಿತಿಯಲ್ಲಿಲ್ಲ. (ಪಿಟಿಐ)