
ನವದೆಹಲಿ: ಸುರೇಶ್ ರೈನಾ ನನ್ನ ಮಗನಿದ್ದಂತೆ. ಆದರೆ ಆತನನ್ನು ಚೆನ್ನೈ ಸೂಪರ್ ಕಿಂಗ್ಸ್ಗೆ ಮತ್ತೆ ಕರೆತರುವ ನಿರ್ಧಾರವನ್ನು ನಾನು ಮಾಡಲಾರೆ. ಅದನ್ನು ಮಹೇಂದ್ರ ಸಿಂಗ್ ಮುಂದಾಳತ್ವದ ಸಿಎಸ್ಕೆ ಮ್ಯಾನೇಜ್ಮೆಂಟ್ ನಿರ್ಧರಿಸಬೇಕು ಎಂದು ಸಿಎಸ್ಕೆ ಮಾಲೀಕ ಎನ್ ಶ್ರೀನಿವಾಸನ್ ಹೇಳಿದ್ದಾರೆ.
ಕಳೆದ ವಾರ ಸಿಎಸ್ಕೆ ತಂಡದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿತ್ತು. 10-11 ಮಂದಿ ಸಿಬ್ಬಂದಿಗಳಲ್ಲದೆ ವೇಗಿ ದೀಪಕ್ ಚಹಾರ್ ಮತ್ತು ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್ಗೂ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಅವರೆಲ್ಲರೂ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ಪಂಜಾಬ್ನ ಪಠಾಣ್ಕೋಟ್ನಲ್ಲಿ ನಡೆದ ಡಕಾಯಿತರ ದಾಳಿಯಲ್ಲಿ ರೈನಾ ಮಾವ ಮತ್ತು ಅತ್ತೆ ನಿಧನರಾಗಿದ್ದರು. ಇದೇ ವೇಳೆಗೆ ರೈನಾ ಅವರು ದುಬೈನಿಂದ ಭಾರತಕ್ಕೆ ವಾಪಸ್ಸಾಗಿದ್ದರು. ಇದರ ಬೆನ್ನಲ್ಲೇ ಸಿಎಸ್ಕೆ ಜೊತೆ ರೈನಾ ಮನಸ್ತಾಪ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಸಿಎಸ್ಕೆ ಮಾಲೀಕ ಶ್ರೀನಿವಾಸನ್ ಕೂಡ ರೈನಾ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದರು.
ರೈನಾ ಬಗ್ಗೆ ಈಗ ಮಾತನಾಡಿರುವ ಶ್ರೀನಿವಾಸನ್, 'ನಾನು ರೈನಾನನ್ನು ನನ್ನ ಮಗನಂತೆ ನೋಡಿದ್ದೇನೆ. ಆಟಗಾರರ ವಿಚಾರದಲ್ಲಿ ಫ್ರಾಂಚೈಸಿ ಯಾವತ್ತೂ ಮೂಗು ತೂರಿಸಿಲ್ಲ. ಸಿಎಸ್ಕೆ ಯಶಸ್ಸಿಗೆ ಮುಖ್ಯ ಕಾರಣ ಇದೇ. ನಾವು ತಂಡದ ಮಾಲೀಕರಷ್ಟೇ. ನಾವು ಆಟಗಾರರ ಮಾಲೀಕರಲ್ಲ. ಹೀಗಾಗಿ ರೈನಾ ಮತ್ತೆ ಸಿಎಸ್ಕೆಗೆ ಕಮ್ಬ್ಯಾಕ್ ಮಾಡುವುದನ್ನು ಆತ ಮತ್ತು ಮ್ಯಾನೇಜ್ಮೆಂಟ್ ನಿರ್ಧರಿಸಲಿದೆಯೇ ಹೊರತು ನಾನಲ್ಲ,' ಎಂದರು.