ಕೊಚ್ಚಿ, ಆಗಸ್ಟ್ 03: ಇಂಡಿಯನ್ ಪ್ರಿಮಿಯರ್ ಲೀಗ್ ನ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಕರಾಳ ಅಧ್ಯಾಯವನ್ನು ಕಂಡ ಮೇಲೆ ವೇಗಿ ಶ್ರೀಶಾಂತ್ ತನ್ನ ಮನದಾಳದ ಬಯಕೆಯನ್ನು ಬಿಚ್ಚಿಟ್ಟಿದ್ದಾರೆ. 2019ರ ವಿಶ್ವಕಪ್ ಆಡುವುದು ನನ್ನ ಗುರಿ ಎಂದಿದ್ದಾರೆ.
ಕೊಚ್ಚಿಯಲ್ಲಿ ಆರೆಸ್ಸೆಸ್ ಪ್ರಾಯೋಜಿತ ಸೇವಾಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಚಿತ ಅಹಾರ ವಿತರಣೆ ಮಾಡಿದ ನಂತರ ಮಾತನಾಡಿದ ಶ್ರೀಶಾಂತ್, ನನಗೆ ಪರಿಸ್ಥಿತಿಯ ಅರಿವಿದೆ. ಕೋರ್ಟ್ ನಿಂದ ಪ್ರಕರಣದಲ್ಲಿ ನಿರ್ದೋಷಿಯೆಂದು ತೀರ್ಪು ಬಂದಿರುವುದು ಸಮಾಧಾನ ತಂದಿದೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಇತರರು ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಎರಡೂವರೆ ವರ್ಷ ಕಳೆದ ಮೇಲೆ ಕೋರ್ಟ್ ತೀರ್ಪು ಬಂದಿದೆ. 2019ರೊಳಗೆ ನಾನು ವಿಶ್ವಕಪ್ ತಂಡ ಸೇರುವ ನಿರೀಕ್ಷೆಯಿದೆ.

ನನ್ನ ಆಸೆ ಈಡೇರಲು ಕಠಿಣ ಪರಿಶ್ರಮ ಅಗತ್ಯ. ಅದಕ್ಕಾಗಿ ನಾನು ತಯಾರಿ ನಡೆಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ. ಆತ್ಮಸ್ಥೈರ್ಯ ನನಗೆ ಜಯದ ಹಾದಿ ತೋರಬಲ್ಲದು ಎಂದು ಶ್ರೀಶಾಂತ್ ಹೇಳಿದ್ದಾರೆ. [ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ]
ಎರಡು ವಿಶ್ವಕಪ್ ಆಡಿ ಒಂದು ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಅನುಭವ ಹೊಂದಿರುವ ಶ್ರೀಶಾಂತ್ ಮೇಲಿನ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ನೂ ತೆರವುಗೊಳಿಸಿಲ್ಲ.
'ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ರೊಂದಿಗೆ ಸಂಪರ್ಕ ಇದ್ದಿದ್ದರೆ, ನಾನು ದುಬೈನಲ್ಲಿರುತ್ತಿದ್ದೆ, ಕ್ರಿಕೆಟಿಗನಾಗುತ್ತಿರಲಿಲ್ಲ. ವೃತ್ತಿ ಜೀವನಕ್ಕೂ ಹಾಗೂ ಕಠಿಣ ವೇಳೆಯಲ್ಲೂ ಬೆಂಬಲವಾಗಿ ನಿಂತ ಕೇರಳ ಜನತೆಗೆ ಚಿರಋಣಿಯಾಗಿರುತ್ತೇನೆ' ಎಂದು ಶ್ರೀಶಾಂತ್ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.