ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ಮುಗಿದಿವೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನನ ನೀಡಿ ಗೆಲುವು ದಾಖಲಿಸಿದೆ. ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ದಾಖಲೆಯ ಮೂರನೇ ಬಾರಿಗೆ ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದೆ. ಈ ವೇಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಯಾವುದೇ ಅಧಿಕಾರಿ ಇಲ್ಲದೇ ಇರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. ಈಗ ಐಸಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿತ್ತು. ಪ್ರತಿಷ್ಠಿತ ಐಸಿಸಿ ಟೂರ್ನಿಯನ್ನು ಪಾಕ್ 29 ವರ್ಷಗಳ ಬಳಿಕ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಆತಿಥೇಯ ತಂಡ ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಿದೆ. ಹೀಗಾಗಿ ಪಾಕ್ನಲ್ಲಿ ಮೈದಾನಗಳು ಖಾಲಿ ಖಾಲಿ ಆಗಿದ್ದವು. ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಪಾಕ್ಗೆ ಪ್ರವಾಸವನ್ನು ಬೆಳೆಸದ ಹಿನ್ನೆಲೆ, ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಿತು. ಭಾರತ, ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಅರ್ಹತೆ ಪಡೆದಿದ್ದರಿಂದ ಪ್ರಶಸ್ತಿ ಸುತ್ತಿನ ಕಾದಾಟ ಸಹ ದುಬೈನಲ್ಲಿ ನಡೆಯಿತು. ಈ ವೇಳೆ ಪಿಸಿಬಿ ಅಧಿಕಾರಿಗಳು ಬಾರದೇ ಇರುವುದು ಬಹು ಚರ್ಚೆಗೆ ಗ್ರಾಸವಾಗಿದೆ.

ಆಯೋಜಿತ ದೇಶದ ಪರ ಯಾವೊಬ್ಬ ಅಧಿಕಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಈ ಸುದ್ದಿ ಮಧ್ಯಮಗಳಿಗೆ ಆಹಾರವಾಯಿತು. ಇದರಿಂದಾಗಿ ಪಾಕಿಸ್ತಾನದ ಮಾಜಿ ಆಟಗಾರರು ಮುಜುಗರ ಅನುಭವಿಸುತ್ತಿದ್ದಾರೆ. ಪಂದ್ಯಾವಳಿಯ ನಂತರ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಪಿಸಿಬಿ ನಡೆಯ ವಿರುದ್ಧ ಕೆಂಡ ಕಾರಿದ್ದರು. ಐಸಿಸಿ ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದು, ಟ್ರೋಫಿ ನೀಡುವಾಗ ಪಿಸಿಬಿ ಅಧಿಕಾರಿಯೊಬ್ಬರು ವೇದಿಕೆಯಲ್ಲಿ ಏಕೆ ಇರಲಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದೆ.
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಟ್ರೋಫಿಯನ್ನು ಎತ್ತುವಾಗಿ ಆಯೋಜಿತ ಪಿಸಿಬಿ ಅಧಿಕಾರಿಗಳು ಇರುತ್ತಾರೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ ವೇದಿಕೆಯ ಮೇಲೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕಾಣಿಸಿಕೊಂಡರು. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿತು. ಈ ಬಗ್ಗೆ ಐಸಿಸಿ ಸ್ಪಷ್ಟನೇಯನ್ನು ನೀಡಿದೆ. ಎನ್ಡಿಟಿವಿ ವರದಿಯ ಪ್ರಕಾರ, ಐಸಿಸಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಆಹ್ವಾನಿಸಿತ್ತು. ಆದರೆ ಅವರು ಬರಲು ಸಾಧ್ಯವಾಗದ್ದರಿಂದ, ಈ ಯೋಜನೆ ಬದಲಿಸಲಾಯಿತು ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಆದರೆ ಐಸಿಸಿ ಮೇಲೆ ಪಿಸಿಬಿ ಗಂಭೀರ ಆರೋಪಗಳನ್ನು ಮಾಡಿದೆ ಎಂದು ತಿಳಿದು ಬಂದಿದೆ. ಪಾಕ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿತ್ತು. ಈ ದೇಶದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಚುತಿ ಬಂದಿದೆ. ಪಂದ್ಯಾವಳಿಯ ಸಮಯದಲ್ಲಿ ಐಸಿಸಿ ಹಲವು ತಪ್ಪುಗಳನ್ನು ಮಾಡಿದೆ ಎಂದು ಪಿಸಿಬಿ ತಿಳಿಸಿದೆ.
ಐಸಿಸಿ ಅಧಿಕಾರಿಯೊಬ್ಬರು ಜಿಯೋ ಟಿವಿಗೆ ನೀಡಿದ ಸಂದರ್ಶನದಲ್ಲಿ, "ಪಿಸಿಬಿ ಅಧ್ಯಕ್ಷರು ಅಲಭ್ಯರಾಗಿದ್ದರು. ಐಸಿಸಿ ಆಯೋಜಿತ ದೇಶದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಗೆ ಮಾತ್ರ ಆಮಂತ್ರಣವನ್ನು ನೀಡಿತ್ತು. ಐಸಿಸಿ ಆಮಂತ್ರಣದಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಒಗಳು ಭಾಗವಹಿಸಬಹುದಿತ್ತು. ಅಲ್ಲದೆ ಪಿಸಿಬಿಯ ಅಧಿಕಾರಿಗಳು ಫೈನಲ್ ಪಂದ್ಯದ ವೇಳೆ ದುಬೈನಲ್ಲಿ ಹಾಜರು ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.