ವೆಸ್ಟ್ ಇಂಡಿಸ್ ತಂಡ ಎರಡನೇ ಟಿ20 ಪಂದ್ಯದಲ್ಲಿಯೂ ಭಾರತ ತಂಡವನ್ನು ಮಣಿಸಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅಮೋಘ ಮೇಲುಗೈ ಸಾಧಿಸಿದೆ. ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ ವಿಂಡೀಸ್ ಮೊದಲ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆಯಲ್ಲಿದೆ. ಆದರೆ ಎರಡನೇ ಪಂದ್ಯವನ್ನು ಗೆದ್ದ ಬಳಿಕ ಪಂದ್ಯದ ಗೆಲುವಿಗೆ ಕಾರಣವಾದ ನಿಕೋಲಸ್ ಪೂರನ್ಗೆ ಐಸಿಸಿ ದಂಡವನ್ನು ವಿಧಿಸಿದೆ.
ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪಂದ್ಯ ಸಂಭಾವನೆಯ 15 ಶೇಕಡಾ ದಂಡವನ್ನು ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ಈ ದಂಡನೆ ನೀಡಲಾಗಿದ್ದು ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವಿದನ್ನು ಈ ಕಾನೂನು ಹೇಳುತ್ತದೆ. ಭಾರತದ ಇನ್ನಿಂಗ್ಸ್ನ 4 ನೇ ಓವರ್ನಲ್ಲಿ ಲೆಗ್ ಬಿಫೋರ್ ವಿಕೆಟ್ ಪೂರನ್ ಅವರು ಅಂಪೈರ್ಗಳೊಂದಿಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಐಸಿಸಿ ಈ ಕ್ರಮ ಕೈಗೊಂಡಿದೆ.

ಪೂರನ್ ಉಲ್ಲಂಘನೆಯನ್ನು ಒಪ್ಪಿಕೊಂಡಿರುವ ಕಾರಣ ಮತ್ತು ಮೈದಾನದ ಅಂಪೈರ್ಗಳಾದ ಲೆಸ್ಲಿ ರೀಫರ್ ಮತ್ತು ನಿಗೆಲ್ ಡುಗಿಡ್, ಮೂರನೇ ಅಂಪೈರ್ ಗ್ರೆಗೊರಿ ಬ್ರಾಥ್ವೈಟ್, ನಾಲ್ಕನೇ ಅಧಿಕಾರಿ ಪ್ಯಾಟ್ರಿಕ್ ಗುಸ್ಟರ್ಡ್ ಮತ್ತು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರು ಸೂಚಿಸಿದ ಶಿಸ್ತಿನ ಕ್ರಮಗಳಿಗೆ ಸಮ್ಮತಿಸಿದ ಕಾರಣ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲದೆ ದಂಡ ವಿಧಿಸಲಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸರಣಿಯ ಮೂರನೇ ಪಂದ್ಯಕ್ಕೆ ಈಗ ಸಜ್ಜಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿರುವ ಕಾರಣ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಒತ್ತಡದಲ್ಲಿದೆ ಭಾರತ. ಟೀಮ್ ಇಂಡಿಯಾ ಉಳಿದ ಪಂದ್ಯಗಳಲ್ಲಿ ತನ್ನ ನೈಜ ಸಾಮರ್ಥ್ಯವನ್ನು ಪ್ರದರ್ಶಿಸುವ ಅಗತ್ಯವಿದ್ದು ಮೊದಲ ಎರಡು ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ತಿದ್ದುಕೊಂಡು ಕಣಕ್ಕಿಳಿಯುವುದು ಅಗತ್ಯವಾಗಿದೆ.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನ ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 146 ರನ್. ಇದೇ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ 152 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿತ್ತು. ಹಾಗಾಗಿ ಮೂರನೇ ಪಂದ್ಯದಲ್ಲಿಯೂ ಇಲ್ಲಿ ಹೈಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ. ಇಲ್ಲಿ ಆಡಿರುವ ಸರಣಿಯ ಎರಡನೇ ಪಂದ್ಯವೂ ಸೇರಿದಂತೆ ಇಲ್ಲಿ ಆಡಿರುವ 9 ಪಂದ್ಯಗಳ ಪೈಕಿ ಆರು ಪಂದ್ಯಗಳಲ್ಲಿ ರನ್ ಬೆನ್ನಟ್ಟಿರುವ ತಂಡ ಗೆಲುವು ಸಾಧಿಸಿದೆ. ಹಾಗಾಗಿ ಟಾಸ್ ಗೆದ್ದ ತಂಡ ಇಲ್ಲಿ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿರಲಿದೆ.
ಸಂಭಾವ್ಯ ಆಡುವ ಬಳಗ
ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ ಬಳಗ: ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಕೈಲ್ ಮೇಯರ್ಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್), ರೋವ್ಮನ್ ಪೊವೆಲ್ (ನಾಯಕ), ಓಡಿಯನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್
ಟೀಮ್ ಇಂಡಿಯಾ: ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್