ಬುಲವಾಯೊ: ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ 58 ರನ್ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಉತ್ತಮವಾಗಿತ್ತು. ಆರಂಭಿಕರು ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಏರಾನ್ ಜಾರ್ಜ್ (16), ವೈಭವ್ ಸೂರ್ಯವಂಶಿ (30) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ಜೋಡಿ 7.4 ಓವರ್ಗಳಲ್ಲಿ 47 ರನ್ ಸೇರಿಸಿತು. ನಾಯಕ ಆಯುಷ್ ಮಾತ್ರೆ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು.

47 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ವೇದಾಂತ್ ತ್ರಿವೇದಿ, ವಿಹಾನ್ ಮಲ್ಹೋತ್ರಾ ಜೋಡಿ ಆಸರೆಯಾಯಿತು. ಈ ಜೋಡಿ 94 ಎಸೆತಗಳಲ್ಲಿ 62 ರನ್ ಸೇರಿಸಿತು. ವಿಹಾನ್ 21 ರನ್ಗಳಿಗೆ ಆಟ ಮುಗಿಸಿದರು. ಅಭಿಜ್ಞಾನ್ ಕುಂಡು 16, ಆರ್ಎಸ್ ಅಂಬರೀಶ್ 29 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ವೇದಾಂತ್ ತ್ರಿವೇದಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿದರು.
ಎಂಟನೇ ವಿಕೆಟ್ಗೆ ಖಿಲಾನ್ ಪಟೇಲ್ (21) ಹಾಗೂ ಕನಿಷ್ಕ್ ಚೌಹಾಣ್ (35) ಜೋಡಿ ಸ್ಥಿರ ಬ್ಯಾಟಿಂಗ್ ನಡೆಸಿದರು. ಅಲ್ಲದೆ 50 ರನ್ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಅಂತಿಮವಾಗಿ ಭಾರತ 49.5 ಓವರ್ಗಳಲ್ಲಿ 252 ರನ್ಗಳಿಗೆ ಸರ್ವಪತನ ಕಂಡಿತು.
ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ 11 ಎಸೆತಗಳಲ್ಲಿ 9 ರನ್ಗಳಿಗೆ ಔಟಾದರು. ಪಾಕ್ ಪರ ಎರಡನೇ ವಿಕೆಟ್ಗೆ ಹಮ್ಜಾ ಜಹೂರ್ ಹಾಗೂ ಉಸ್ಮಾನ್ ಖಾನ್ ಜೋಡಿ 80 ಎಸೆತಗಳಲ್ಲಿ 65 ರನ್ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ 42 ರನ್ ಬಾರಿಸಿದ್ದ ಹಮ್ಜಾ ಔಟ್ ಆದರು.
3ನೇ ವಿಕೆಟ್ಗೆ ಉಸ್ಮಾನ್ ಖಾನ್ ಮತ್ತು ಫರ್ಹಾನ್ ಯುಸೂಫ್ ಜೋಡಿ ಸಹ ಆರ್ಭಟಿಸಿತು. ಈ ಜೋಡಿ 76 ಎಸೆತಗಳಲ್ಲಿ 63 ರನ್ ಸೇರಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಆರ್ಎಸ್ ಅಂಬರೀಷ್ ಸಫಲರಾದರು. ಉಸ್ಮಾನ್ ಖಾನ್ 7 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರು. ಉಳಿದ ಬ್ಯಾಟರ್ಗಳು ಭಾರತದ ಕರಾರುವಾಕ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಪಾಕ್ 46.2 ಓವರ್ಗಳಲ್ಲಿ 194 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಖಿಲನ್ ಪಟೇಲ್ ಹಾಗೂ ಆಯುಷ್ ಮಾತ್ರೆ ತಲಾ ಮೂರು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಸೋತ ಪಾಕ್ ಟೂರ್ನಿಯಿಂದ ಹೊರ ನಡೆದಿದೆ.