ಭಾರತದ ವಿರುದ್ಧ ಸೋತ ಬಳಿಕ ಆತ್ಮಹತ್ಯೆಗೆ ಯೋಚಿಸಿದ್ದರಂತೆ ಪಾಕ್ ಕೋಚ್

ಲಂಡನ್, ಜೂನ್ 25: ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಅನುಭವಿಸಿದ ಬಳಿಕ ತೀವ್ರ ನಿರಾಶೆಯಿಂದ ಕುಸಿದು ಹೋದಂತಾಗಿದ್ದೆ. ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೂ ಮನಸಿನಲ್ಲಿ ಮೂಡಿತ್ತು ಎಂದು ಪಾಕಿಸ್ತಾನದ ತರಬೇತುದಾರ ಮಿಕ್ಕಿ ಆರ್ಥರ್ ಹೇಳಿದ್ದಾರೆ.
ಜೂನ್ 16ರಂದು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 89 ರನ್ಗಳಿಂದ ಸೋಲಿಸಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಇದು ಪಾಕಿಸ್ತಾನದ ಸತತ ಏಳನೇ ಸೋಲಾಗಿತ್ತು. ವಿಶ್ವಕಪ್ನಲ್ಲಿ ಪಾಕಿಸ್ತಾನ ಒಮ್ಮೆಯೂ ಭಾರತವನ್ನು ಮಣಿಸಿರಲಿಲ್ಲ.
ಪಾಕಿಸ್ತಾನದ ಹೀನಾಯ ಸೋಲಿಗೆ ಆ ದೇಶದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ನಾಯಕ ಸರ್ಫರಾಜ್ ಖಾನ್ ಮತ್ತು ತಂಡದ ಆಡಳಿತ ಸೇರಿದಂತೆ ಇಡೀ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಕಿಡಿಕಾರಿದ್ದರು.
ಆದರೆ, ಇದರ ಬಳಿಕ ಪಾಕಿಸ್ತಾನದ ಪ್ರಬಲವಾಗಿ ಪುಟಿದೆದ್ದಿದೆ. ಫಾಫ್ ಡುಪ್ಲೆಸಿಸ್ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್ಗಳ ಗೆಲುವು ಸಾಧಿಸುವ ಮೂಲಕ ಆ ತಂಡವನ್ನು ಸ್ಪರ್ಧೆಯಿಂದ ಹೊರಹಾಕಿದೆ. ಮಾತ್ರವಲ್ಲ, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
'ಕಳೆದ ಭಾನುವಾರ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದೆ' ಎಂದು ಲಾರ್ಡ್ಸ್ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಿಕ್ಕಿ ಆರ್ಥರ್ ಹೇಳಿದ್ದಾರೆ. 'ಆದರೆ, ಅದು ನಿಮಗೆ ಗೊತ್ತಿರುವಂತೆ ಒಂದೇ ಒಂದು ಪ್ರದರ್ಶನವಷ್ಟೇ ಆಗಿತ್ತು' ಎಂದು ತಂಡ ಮತ್ತೆ ಗೆಲುವು ಕಂಡ ನೆಮ್ಮದಿಯನ್ನು ಹಂಚಿಕೊಂಡಿದ್ದಾರೆ.
'ಅದು ವೇಗವಾಗಿ ನಡೆಯುತ್ತದೆ. ಒಂದು ಪಂದ್ಯವನ್ನು ಸೋಲುತ್ತೀರಿ, ಮತ್ತೊಂದು ಪಂದ್ಯವನ್ನು ಸೋಲುತ್ತೀರಿ; ಇದು ವಿಶ್ವಕಪ್. ಮಾಧ್ಯಮಗಳ ವಿಶ್ಲೇಷಣೆ, ಜನರ ನಿರೀಕ್ಷೆಗಳು ಮತ್ತು ಇವುಗಳ ನಡುವೆ ನೀವು ಬಹುತೇಕ ಅಸ್ತಿತ್ವಕ್ಕಾಗಿ ಹೋರಾಟದ ಸ್ಥಿತಿಗೆ ತಲುಪಿರುತ್ತೀರಿ. ನಾವೆಲ್ಲರೂ ಅದೇ ಸ್ಥಿತಿಯಲ್ಲಿದ್ದೆವು' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications