
ಲಂಡನ್, ಜೂನ್ 12: ಸಾಧ್ಯವಾದಷ್ಟು ಬೇಗ ಲಂಡನ್ ವಿಮಾನ ಹತ್ತುವಂತೆ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಬ್ ಪಂತ್ಗೆ ಬಿಸಿಸಿಐ ಕರೆ ನೀಡಿದೆ. ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿರುವುದರಿಂದ ಭಾರತ ವಿಶ್ವಕಪ್ ತಂಡ ಸೇರಿಕೊಳ್ಳುವಂತೆ ಬಿಸಿಸಿಐಯು ಪಂತ್ಗೆ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮಾಹಿತಿಯ ಪ್ರಕಾರ, ಶಿಖರ್ ಧವನ್ ಅವರನ್ನು ತಂಡದಲ್ಲೇ ಉಳಿಸಿಕೊಂಡು, ಅವರ ಆರೋಗ್ಯ ಸ್ಥಿತಿಗತಿಗಳ ಮೇಲೆ ಬಿಸಿಸಿಐ ನಿಗಾವಹಿಸುತ್ತಿರುವುದರಿಂದ ಪಂತ್ ಅವರನ್ನು ಭಾರತ ವಿಶ್ವಕಪ್ ತಂಡದಲ್ಲಿ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಮುಂಜಾಗೃತಾ ಕ್ರಮವಾಗಿ ಪಂತ್ ಅವರನ್ನು ಲಂಡನ್ಗೆ ಕರೆಸಿಕೊಳ್ಳಲಾಗುತ್ತಿದೆ.
ಇದಕ್ಕೂ ಮೊದಲು 15 ಜನರ ಭಾರತ ವಿಶ್ವಕಪ್ ತಂಡದಲ್ಲಿ ಯುವ ಸ್ಫೋಟಕ ಬ್ಯಾಟ್ಸ್ಮನ್ ಪಂತ್ ಅವರನ್ನು ಕಡೆಗಣಿಸಲಾಗಿತ್ತು. ಪಂತ್ ಬದಲಿಗೆ ಅನುಭವಿ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಅವರನ್ನು ಸ್ಟ್ಯಾಂಡ್ಬೈ ಆಟಗಾರನಾಗಿ ಹೆಸರಿಸಲಾಗಿತ್ತು. ಆದರೆ ಧವನ್ ಗಾಯದ ಬಳಿಕ ರಾಯುಡು ಬದಲಿಗೆ ದೆಹಲಿ ಬ್ಯಾಟ್ಸ್ಮನ್ಗೆ ಆದ್ಯತೆ ನೀಡಲಾಗಿದೆ.
ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ರೋಹಿತ್ ಶರ್ಮಾ ಅವರಿಗೆ ಸಾಥ್ ನೀಡುವುದನ್ನು ನಿರೀಕ್ಷಿಸಲಾಗಿದೆ. ಒಂದೋ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಭಾರತ ಮುಂದೆ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಕಾದಾಡುವುದರಲ್ಲಿದೆ.