ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವುದು ದೃಢಪಟ್ಟಿದೆ. ಅಕ್ಟೋಬರ್ 15ರಂದು ನಡೆಯಬೇಕಿದ್ದ ಈ ಪಂದ್ಯವನ್ನು ಭದ್ರತಾ ದೃಷ್ಟಿಯಿಂದ ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಈಗ ವೇಳಾಪಟ್ಟಿಯಲ್ಲಿರುವ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿಯೇ ಈ ಪಂದ್ಯ ಆಯೋಜನೆಯಾಗಲಿದೆ. ಬದಲಾದ ವೇಳಾಪಟ್ಟಿ ಅಧಿಕೃತವಾಗಿ ಇನ್ನಷ್ಟೇ ಘೋಷಣೆಯಾಗಲಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದು ವೇಳಾಪಟ್ಟಿ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಇನ್ನು ಪಾಕಿಸ್ತಾನ ಈ ಪಂದ್ಯವನ್ನು ಅಹ್ಮದಾಬಾದ್ನಲ್ಲಿ ನಡೆಸಬಾರದೆಂದ ಪಟ್ಟುಹಿಡಿದಿದ್ದ ಕಾರಣ ತಾಣದ ಬಗ್ಗೆಯೂ ಗೊಂದಲ ಉಂಟಾಗಿತ್ತು. ಆದರೆ ಅಂತಿಮವಾಗಿ ಅಹ್ಮದಾಬಾದ್ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಅಕ್ಟೋಬರ್ 15ರಂದು ಆಯೋಜನೆ ಮಾಡಿ ದಿನಾಂಕವನ್ನು ಪ್ರಕಟಿಸಿತ್ತು ಐಸಿಸಿ.

ಆದರೆ ಅಕ್ಟೋಬರ್ 15ರಿಂದ ನವರಾತ್ರಿ ಆರಂಭವಾಗಲಿದ್ದು ಗುಜರಾತ್ನಲ್ಲಿ ಈ ಹಬ್ಬವವನ್ನು ವಿಜೃಂಭಣೆಯಿಂದ ಆಚರಿಸುವ ಕಾರಣ ಭದ್ರತೆಯ ಕಾರಣದಿಂದಾಗಿ ಈ ದಿನಾಂಕವನ್ನು ಬದಲಾವಣೆ ಮಾಡುವಂತೆ ಸ್ಥಳೀಯ ಪೊಲೀಸ್ ಇಲಾಖೆ ಸಲಹೆ ನೀಡಿತ್ತು. ಹೀಗಾಗಿ ಬಿಸಿಸಿಐ ಐಸಿಸಿಗೆ ಈ ವಿಚಾರವನ್ನು ಮನದಟ್ಟು ಮಾಡಿದೆ. ಇನ್ನು ಭಾರತ ಹಾಗೂ ಪಾಕಿಸ್ಥಾನ ನಡುವಿನ ಪಂದ್ಯಗಳು ಮಾತ್ರವಲ್ಲದೆ ಇನ್ನೂ ಕೆಲ ಮಂಡಳಿಗಳು ತಮ್ಮ ಕೆಲ ಪಂದ್ಯಗಳ ದಿನಾಂಕದಲ್ಲಿ ಬದಲಾವಣೆಗೆ ಪತ್ರವನ್ನು ಬರೆದಿದ್ದು ಅದನ್ನು ಕೂಡ ಐಸಿಸಿ ಪರಿಗಣಿಸಿ ಬದಲಾವಣೆಯೊಂದಿಗೆ ವೇಳಾಪಟ್ಟಿಯನ್ನು ಮತ್ತೆ ಪ್ರಕಟಿಸಲಿದೆ ಎನ್ನಲಾಗಿದೆ.
ಹೀಗಾಗಿ ಅಹ್ಮದಾಬಾದ್ನಲ್ಲಿ ಅಕ್ಟೋಬರ್ 15ರಂದು ಆರಂಭವಾಗಬೇಕಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆಗಸ್ಟ್ 14ರಂದು ಆಯೋಜನೆಯಾಗಲಿದೆ. ಈ ಬಗ್ಗೆ ಐಸಿಸಿ ಸೋಮವಾರವೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.
ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ಈ ಬಗ್ಗೆ ಸುಳಿವು ನೀಡಿದ್ದರು. ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕೆಂದು ಮೂರು ಮಂಡಳಿಗಳು ಐಸಿಸಿಗೆ ಮನವಿ ಮಾಡಿವೆ ಎಂದ ಅವರು ಪಂದ್ಯಗಳ ನಡುವಿನ ಅಂತರ ಹೆಚ್ಚಾಗಿದ್ದು ಅದನ್ನು ಕಡಿಮೆಗೊಳಿಸಲು ಮನವಿ ಮಾಡಿದ್ದು 4-5 ದಿನಗಳಿಗೆ ತಗ್ಗಿಸುವ ಪ್ರಯತ್ನಗಳು ಆಗುತ್ತಿವೆ ಎಂದಿದ್ದರು. ಆದರೆ ಆ ಮಂಡಳಿಗಳು ಯಾವುದು ಎನ್ನುವುದನ್ನು ಜಯ್ ಶಾ ಬಹಿರಂಗಪಡಿಸಿರಲಿಲ್ಲ.
"ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ಮೂರು ಮಂಡಳಿಗಳು ಐಸಿಸಿಗೆ ಮನವಿ ಮಾಡಿಕೊಂಡಿದೆ. ಕೇವಲ ಪಂದ್ಯದ ದಿನಾಂಕ ಹಾಗೂ ಸಮಯದಲ್ಲಿ ಮಾತ್ರವೇ ಬದಲಾವಣೆಯಾಗಲಿದೆ. ತಾಣಗಳು ಬದಲಾವಣೆಯಾಗುವುದಿಲ್ಲ. ಎರಡು ಪಂದ್ಯಗಳ ಮಧ್ಯೆ 6 ದಿನಗಳ ಅಂತರದಿದ್ದರೆ ಅದನ್ನು 4-5 ದಿನಗಳಿಗೆ ತಗ್ಗಿಸುವ ಪ್ರಯತ್ನ ನಡೆಸಲಿದ್ದೇವೆ. ಮೂರ್ನಾಲ್ಕು ದಿನದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಐಸಿಸಿ ನಿರ್ಧಾರದ ಪ್ರಕಾರ ಈ ಬದಲಾವಣೆಯಾಗಲಿದೆ" ಎಂದು ಜಯ್ ಶಾ ಮಾಹಿತಿ ನೀಡಿದ್ದರು.