ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲಿನ ನಂತರ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರು ಪಾಕಿಸ್ತಾನ ತಂಡವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.
ಸಾಂಪ್ರದಾಯಿಕ ಎದುರಾಳಿಗಳ ಬಹು ನಿರೀಕ್ಷಿತ ಪಂದ್ಯದಲ್ಲಿ, ಭಾರತ ತಂಡ ಪಾಕಿಸ್ತಾನ ವಿರುದ್ಧ ಸುಲಭ ಗೆಲುವು ಸಾಧಿಸಿತು. ಇದು ಏಕದಿನ ವಿಶ್ವಕಪ್ನಲ್ಲಿ ಭಾರತ ವಿರುದ್ಧ 1992ರಿಂದ ಪ್ರಾರಂಭವಾದ ಪಾಕಿಸ್ತಾನ ತಂಡದ ಸೋಲಿನ ಸರಣಿ ಈಗಲೂ ಮುಂದುವರೆದಿದೆ.

ಪಾಕಿಸ್ತಾನದ ಪ್ರದರ್ಶನದಿಂದ ಹೈ-ವೋಲ್ಟೇಜ್ ಎನಿಸಿಕೊಂಡಿದ್ದ ಈ ಪಂದ್ಯ ಏಕಪಕ್ಷೀಯವಾಗಿ ಸಾಗಿತು. 155 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ನಂತರ 191 ರನ್ಗಳಿಗೆ ಆಲೌಟ್ ಆಯಿತು. ನಂತರ ಭಾರತ ತಂಡ ಇನ್ನೂ 117 ಎಸೆತಗಳು ಬಾಕಿ ಇರುವಂತೆಯೇ ಸುಲಭವಾಗಿ ಗುರಿ ಬೆನ್ನಟ್ಟಿತು.
ಪ್ರಮುಖವಾಗಿ ಕುಲದೀಪ್ ಯಾದವ್ ಅವರು ಸೌದ್ ಶಕೀಲ್ ಮತ್ತು ಇಫ್ತಿಕರ್ ಅಹ್ಮದ್ ಅವರನ್ನು ಔಟ್ ಮಾಡಿ, ಪಾಕಿಸ್ತಾನದ ಬ್ಯಾಟರ್ಗಳ ಮೇಲೆ ಒತ್ತಡ ಹೇರಿದರು. ಇನ್ನು ಜಸ್ಪ್ರೀತ್ ಬುಮ್ರಾ ಅವರು ಮೊಹಮ್ಮದ್ ರಿಜ್ವಾನ್ ಮತ್ತು ಶಾದಾಬ್ ಖಾನ್ ಅವರ ವಿಕೆಟ್ ಪಡೆದರು.
ಮೊಹಮ್ಮದ್ ಸಿರಾಜ್ ಆರಂಭಿಕ ಶಕೀಲ್ ಅಬ್ದುಲ್ಲಾ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ ಆಕರ್ಷಕ 86 ರನ್ ಮತ್ತು ಶ್ರೇಯಸ್ ಅಯ್ಯರ್ 61 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರು ಪಾಕಿಸ್ತಾನ ತಂಡದ ಪ್ರದರ್ಶನವನ್ನು ತೀವ್ರವಾಗಿ ಟೀಕಿಸಿದರು. ಸೋಲುವುದಿರಲಿ, ಅವರು ಕನಿಷ್ಠ ಸ್ಪರ್ಧೆ ನೀಡಲು ಸಾಧ್ಯವಾಗಲಿಲ್ಲ ಎಂದು ಭಾವಿಸಿದರು ಮತ್ತು ಬಾಬರ್ ಅಜಂ ಸಂದರ್ಭಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಿತ್ತು ಎಂದರು.
"ಇದು ಪಾಕಿಸ್ತಾನವನ್ನು ನೋಯಿಸುತ್ತದೆ. ಏಕೆಂದರೆ ಅವರು ಸ್ಪರ್ಧಿಸಲು ಸಾಧ್ಯವಾಗಲಿಲ್ಲ," ಎಂದು ರಮೀಜ್ ರಾಜಾ ದಿ ಐಸಿಸಿ ರಿವ್ಯೂ ಪಾಡ್ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ ಹೇಳಿದ್ದಾರೆ.

"ನೀವು ಭಾರತದ ವಿರುದ್ಧ ಆಡುವಾಗ ನಿಸ್ಸಂಶಯವಾಗಿ, ಇದು ಶೇಕಡಾ 99ರಷ್ಟು ಭಾರತದ ಅಭಿಮಾನಿಗಳು ಮತ್ತು ಜನಸ್ತೋಮದಿಂದ ಕೂಡಿರುವಂತಹ ವಾತಾವರಣವಾಗಿರುತ್ತದೆ. ನೀವು ಅದರಲ್ಲಿ ಮುಳುಗಿದ್ದೀರಿ. ನನಗೆ ಇದೆಲ್ಲವೂ ಅರ್ಥವಾಗುತ್ತದೆ. ಆದರೆ ಬಾಬರ್ ಅಜಂ ಈ ತಂಡವನ್ನು ನಾಲ್ಕೈದು ವರ್ಷಗಳಿಂದ ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಹೀಗಾಗಿ ಅವರು ಸಂದರ್ಭಕ್ಕೆ ತಕ್ಕಂತೆ ಆಡಬೇಕಾಗಿದೆ. ನೀವು ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಹೋರಾಟ ನೀಡಿ, ಪಾಕಿಸ್ತಾನಕ್ಕೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ," ಎಂದು ಕಿಡಿಕಾರಿದರು.
ಭಾರತದ ವಿರುದ್ಧ ವಿಶ್ವಕಪ್ ಪಂದ್ಯಗಳನ್ನು ಆಡಲು ಬಂದಾಗ ಪಾಕಿಸ್ತಾನ ತಂಡ ಮಾನಸಿಕವಾಗಿ ನಿರ್ಬಂಧ ಹೊಂದಿದೆ ಎಂದು ಮಾಜಿ ಪಿಸಿಬಿ ಅಧ್ಯಕ್ಷರೂ ಆಗಿರುವ ರಮೀಜ್ ರಾಜಾ ಒಪ್ಪಿಕೊಂಡರು ಮತ್ತು ಅತ್ಯುತ್ತಮ ಪ್ರದರ್ಶನಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು ಶ್ಲಾಘಿಸಿದರು.
"ಇದು ವಾಸ್ತವ ಮತ್ತು ಪಾಕಿಸ್ತಾನ ಅದರ ಬಗ್ಗೆ ಏನಾದರೂ ಚಿಂತಿಸಬೇಕಾಗಿದೆ. ಪಾಕಿಸ್ತಾನವನ್ನು ಭಾರತದ ವಿರುದ್ಧ 'ಚೋಕರ್ಸ್' ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ, ಇದು ಮಾನಸಿಕ ಹಾಗೂ ಕೌಶಲ್ಯ ನಿರ್ಬಂಧವಾಗಿದೆ," ಎಂದು ರಮೀಜ್ ರಾಜಾ ಅಭಿಪ್ರಾಯಪಟ್ಟರು.
"ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯಗಳಲ್ಲಿ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಕ್ಕಾಗಿ ಭಾರತಕ್ಕೆ ಕ್ರೆಡಿಟ್ ಸಲ್ಲಬೇಕು. ಇದು ಭಾರತಕ್ಕೆ ಸುಲಭದ ಪಂದ್ಯವಾಗಿರಲಿಲ್ಲ. ಭಾವನೆಗಳು ಮತ್ತು ನಿರೀಕ್ಷೆಗಳು ಅಪಾರವಾಗಿರುವ ಪಂದ್ಯವಾಗಿರುತ್ತದೆ," ಎಂದು ತಿಳಿಸಿದರು.
ಅಹಮದಾಬಾದ್ನಲ್ಲಿ ಪಾಕಿಸ್ತಾನದ ಸೋಲು ಮತ್ತೊಂದು ಗಾಯವಾಗಿದೆ ಎಂದ ರಮೀಜ್ ರಾಜಾ, ಭಾರತ ಎಲ್ಲಾ ವಿಭಾಗಗಳಲ್ಲಿ ಪಾಕಿಸ್ತಾನ ತಂಡವನ್ನು ಮೀರಿಸಿದೆ ಎಂದರು.
"ಇದು ಪಾಕಿಸ್ತಾನ ನೋವುಂಟು ಮಾಡಲಿದೆ. ತಕ್ಷಣವೇ ಬಾಬರ್ ಅಜಂ ಮತ್ತು ಹಿರಿಯ ಆಟಗಾರರು ಕೆಲವು ಯುವ ಆಟಗಾರರ ಜೊತೆ ಮಾತನಾಡಿ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ತಂಡದ ಸಭೆಗಳಲ್ಲಿ ಅವರು ಕಠಿಣವಾಗಿ ಹಾಗೂ ಪ್ರಾಮಾಣಿಕರಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಪಾಕಿಸ್ತಾನ ತಂಡವನ್ನು ಕಟ್ಟುವ ಕೆಲಸ ಅಲ್ಲಿಂದ ಪ್ರಾರಂಭವಾಗಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅಭಿಪ್ರಾಯಪಟ್ಟರು.