
ನವದೆಹಲಿ, ಏಪ್ರಿಲ್ 17: ಈ ಬಾರಿಯ ವಿಶ್ವಕಪ್ ಕ್ರಿಕೆಟ್ನಲ್ಲಿ ನಾನೊಂದು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇದ್ದಂತೆ ಎಂದು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ. 2019ರ ವಿಶ್ವಕಪ್ಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿರುವುದಕ್ಕೆ ಸಂಬಂಧಿಸಿ ಕಾರ್ತಿಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ (ಏಪ್ರಿಲ್ 15) ಬಿಸಿಸಿಐಯು ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿರುವ ಭಾರತ ಅಂತಿಮ ತಂಡವನ್ನು ಪ್ರಕಟಿಸಿತ್ತು. ಇದರಲ್ಲಿ 15 ಜನ ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಹೆಸರೂ ಸೇರಿಕೊಂಡಿತ್ತು. ಆದರೆ ಪ್ರತಿಷ್ಠಿತ ಟೂರ್ನಿಯಲ್ಲಿ ತನಗೆ ಸಿಗಬಹುದಾದ ಅವಕಾಶ ಕಡಿಮೆ ಎಂಬುದು ಕಾರ್ತಿಕ್ಗೆ ಮನವರಿಕೆಯಾಗಿದೆ. ಹೀಗಾಗಿಯೇ ಕಾರ್ತಿಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.
'ವಿಶ್ವಕಪ್ನಲ್ಲಿ ಧೋನಿಯ ವಿಚಾರಕ್ಕೆ ಬಂದರೆ, ನಾನು ಧೋನಿ ಜೊತೆಗೆ ಹೊತ್ತೊಯ್ಯುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಿದ್ದಂತೆ. ಸಣ್ಣ ಗಾಯಕ್ಕೆ ಹಚ್ಚುವ ಬ್ಯಾಂಡ್-ಏಡ್ ಬಗ್ಗೆ ನಿಮಗೆ ಗೊತ್ತೇಯಿದೆ' ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, 33ರ ಹರೆಯದ ಕಾರ್ತಿಕ್ ಹೇಳಿದರು.
'ಆದರೆ ನನಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ, ಫಿನಿಶರ್ ಅನ್ನಿಸಿಕೊಳ್ಳುವ ಅವಕಾಶವೂ ಇದೆ ಎಂದು ನಾನು ಭಾವಿಸಿದ್ದೇನೆ. ಹಿಂದೊಮ್ಮೆ ಮಾಡಿದ ಅದೇ ಫಿನಿಷಶರ್ ಪಾತ್ರವನ್ನು ನಾನು ಇಲ್ಲೂ ಮಾಡಬಲ್ಲೆ ಎಂದುಕೊಂಡಿದ್ದೇನೆ' ಎಂದು ದಿನೇಶ್ ಹೇಳಿಕೊಂಡಿದ್ದಾರೆ.