
ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರನ್ನು ಸಂಪರ್ಕಿಸಲು ತುಂಬಾ ಹೆದರುತ್ತಿದ್ದರು ಎಂದು ಹೇಳಿದ್ದಾರೆ. ಒಂದು ವೇಳೆ ವಿಕೆಟ್ ಕಬಳಿಸದೇ ಇದ್ದರೆ ಕೊಹ್ಲಿ ಅವರು ನನ್ನನ್ನ ಕೆಣಕುತ್ತಿದ್ದರು ಎಂದು ನೆನಪಿಸಿಕೊಂಡರು.
ಐಪಿಎಲ್ನಲ್ಲಿ ಸುದೀರ್ಘ ಕಾಲ ಕೊಹ್ಲಿ ನೇತೃತ್ವದ ಆರ್ಸಿಬಿ ಪರ ಆಡಿದ್ದ ಯುಜ್ವೇಂದ್ರ ಚಹಾಲ್ ಈ ಬಾರಿ ಯಾವುದೇ ಫ್ರಾಂಚೈಸಿ ಪರ ಆಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಹಿಂದಿರುಗುವುದನ್ನ ಸಹ ಎದುರು ನೋಡುತ್ತಿದ್ದಾರೆ.
ಆರ್ಸಿಬಿ ಅವರನ್ನು ಉಳಿಸಿಕೊಳ್ಳದ ಕಾರಣ ಚಹಾಲ್ ಹರಾಜಿಗೆ ಲಭ್ಯರಾಗಿದ್ದರು. ಚಹಾಲ್ ಇತ್ತೀಚೆಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನೊಂದಿಗೆ ಮಾತನಾಡುವಾಗ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಆರ್ಸಿಬಿಯಲ್ಲಿನ ತಮ್ಮ ಆರಂಭಿಕ ಅನುಭವಗಳನ್ನು ಅವರು ಮೆಲುಕು ಹಾಕಿದ್ದಾರೆ.
''2014ರಲ್ಲಿ ಮೊದಲ ಬಾರಿಗೆ ಆರ್ಸಿಬಿ ತಂಡವನ್ನು ಸೇರಿಕೊಂಡಾಗ ನನಗೆ ತುಂಬಾ ಚಿಂತೆಯಾಗಿತ್ತು. ಮೈದಾನದಲ್ಲಿ ಕೊಹ್ಲಿಯನ್ನು ಕಂಡರೆ ಭಯವಾಗುತ್ತಿತ್ತು. ನಾನು ಬೌಲಿಂಗ್ ಮಾಡುವಾಗ ಅವರು ಕವರ್ಗಳಲ್ಲಿ ತುಂಬಾ ಆಕ್ರಮಣಕಾರಿ ಮತ್ತು ಶಕ್ತಿಯುತ ಫೀಲ್ಡಿಂಗ್ ಮಾಡುತ್ತಿದ್ದರು. ನಾನು ಹದಿಹರೆಯದವನಾಗಿದ್ದಾಗ ಒಮ್ಮೆ ವಿಕೆಟ್ ತೆಗೆದುಕೊಳ್ಳಲಿಲ್ಲ ಎಂದು ಅವನು ನನ್ನ ಮೇಲೆ ಕೋಪಗೊಂಡಿದ್ರು. ಆದರೆ, ನಾನು ವಿಕೆಟ್ ಪಡೆದಾಗ ನನ್ನ ಕೋಪವನ್ನು ತೋರಿಸಲು ಬ್ಯಾಟ್ಸ್ಮನ್ಗಳ ಕಡೆಗೆ ಹೋಗುತ್ತಿದ್ದೆ. ಎರಡ್ಮೂರು ಬಾರಿ ಹೀಗಾಯಿತು. ಮ್ಯಾಚ್ ರೆಫರಿ ಅಂದಿನ ಆರ್ಸಿಬಿ ಕೋಚ್ ಡೇನಿಯಲ್ ವೆಟ್ಟೋರಿಗೆ ನನ್ನ ಬಗ್ಗೆ ದೂರಿದ್ದರು'' ಎಂದು ಹಳೆಯ ಘಟನೆಗಳನ್ನ ತಿಳಿಸಿದ್ದಾರೆ.
ಆ ಸಮಯದಲ್ಲಿಯೇ ಇನ್ನೊಂದು ಪಂದ್ಯದಲ್ಲಿ ನಾನು ಮಿತಿ ಮೀರಿ ವರ್ತಿಸಿದೆ. ಅಂದು ವೆಟ್ಟೋರಿ ನನ್ನ ಬಳಿ ಬಂದು ಇದು ಸರಿಯಾದ ವಿಧಾನವಲ್ಲ ಎಂದು ಬುದ್ದಿ ಹೇಳಿದರು. ನನ್ನಲ್ಲಿ ಉತ್ತಮ ಕೌಶಲ್ಯವಿದೆ ಮತ್ತು ಹಾಗೆ ಮಾಡುವುದು ಒಳ್ಳೆಯದಲ್ಲ ಎಂದು ಅವರು ಕೋಪಗೊಂಡರು. ವಿಕೆಟ್ ಉರುಳಿದಾಗ ಓಡಿ ಹೋಗಬೇಕೆನ್ನಿಸಿದರೆ ಕವರ್ಸ್ ಕಡೆಗೆ ಓಡುವಂತೆ ಸಲಹೆ ನೀಡಿದರು. ನಾಯಕ ವಿರಾಟ್ ಕೊಹ್ಲಿ ಅವರ ಬಳಿಗೆ ತೆರಳಿ, ನೀನು ಏನು ಬೇಕಾದ್ರೂ ಹೇಳು, ಅವರು ಏನೂ ಅಂದುಕೊಳ್ಳುವುದಿಲ್ಲ ಎಂದು ಸಲಹೆ ನೀಡಿದರು'' ಎಂದು ಚಹಾಲ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಯುಜವೇಂದ್ರ ಚಹಾಲ್ 139 ವಿಕೆಟ್ಗಳನ್ನ ಕಬಳಿಸಿದ್ದಾರೆ. ಆದ್ರೆ ಈ ಬಾರಿ ಆರ್ಸಿಬಿ ಚಹಾಲ್ರನ್ನ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟಿದೆ. ಆರ್ಸಿಬಿ ಐಪಿಎಲ್ 15ನೇ ಸೀಸನ್ನ ರೀಟೈನ್ ಪ್ರಕ್ರಿಯೆಯಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ರನ್ನ ತಂಡದಲ್ಲಿ ಉಳಿಸಿಕೊಂಡಿದೆ.