ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮುಕ್ತಾಯದ ಬಳಿಕ, ಭಾರತ ಕ್ರಿಕೆಟ್ ತಂಡವು ಜನವರಿ 11, 2024ರಂದು ಮೊಹಾಲಿಯಲ್ಲಿ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ದ್ವಿಪಕ್ಷೀಯ ಟಿ20 ಸರಣಿಯು ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮೊದಲು ಟೀಮ್ ಇಂಡಿಯಾಗೆ ಅಂತಿಮ ವೈಟ್-ಬಾಲ್ ಸರಣಿಯಾಗಿರಲಿದೆ.

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಸರಣಿಯ ಮೊದಲ ಪಂದ್ಯದ ನಂತರ, ಭಾರತ ತಂಡವು ಜನವರಿ 14ರಂದು ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಮತ್ತು ಜನವರಿ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನ ತಂಡವನ್ನು ಮೂರನೇ ಪಂದ್ಯದಲ್ಲಿ ಎದುರಿಸಲಿದೆ.
ಕಳೆದ ಎರಡು ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಮುನ್ನಡೆಸಿದ್ದ ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಡಿಸೆಂಬರ್ 14ರಂದು ಗಾಯಗೊಂಡಿರುವ ಕಾರಣದಿಂದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.

ಸೂರ್ಯಕುಮಾರ್ ಯಾದವ್ ಫೆಬ್ರವರಿ ತನಕ ಕ್ರಿಕೆಟ್ನಿಂದ ಹೊರಗುಳಿಯುತ್ತಾರೆ. ಇನ್ನು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಾದದ ಗಾಯದ ಕಾರಣ, ಅಕ್ಟೋಬರ್ 19, 2023ರಿಂದ ಭಾರತ ತಂಡಕ್ಕಾಗಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಫಿಟ್ನೆಸ್ ಕುರಿತು ವ್ಯತಿರಿಕ್ತ ವರದಿಗಳಿಂದಾಗಿ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.
ಆರಂಭಿಕ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್ ಕೂಡ ಬೆರಳಿನ ಗಾಯದಿಂದ ಹೊರಗುಳಿದಿದ್ದು, ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿಯಬಹುದು.
ಮೂವರ ಅನುಪಸ್ಥಿತಿಯಲ್ಲಿ ನವೆಂಬರ್ 10, 2022ರಿಂದ ಭಾರತ ತಂಡಕ್ಕಾಗಿ ಟಿ20 ಪಂದ್ಯವನ್ನು ಆಡದ ರೋಹಿತ್ ಶರ್ಮಾ, ಟಿ20 ನಾಯಕನಾಗಿ ಮರಳಬಹುದು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಬಹುದು.
ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಟಿ20 ವಿಶ್ವಕಪ್ಗೆ ಮೊದಲು ಭಾರತದ ಕೊನೆಯ ಟಿ20 ಸರಣಿಗೆ ಮರಳುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಕುಲದೀಪ್ ಯಾದವ್ ಅವರು ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ.
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ವಿಕೆಟ್ಕೀಪರ್-ಬ್ಯಾಟರ್ ಆಗಿ ಯಾರಿಗೆ ಮೆಚ್ಚುಗೆ ಸಿಗುತ್ತದೆ ಎಂಬುದನ್ನು ನೋಡುವುದು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಜಿತೇಶ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಇಶಾನ್ ಕಿಶನ್ ಕೂಡ ಇದ್ದಾರೆ.
ಡಿಸೆಂಬರ್ 21ರಂದು ಪಾರ್ಲ್ನ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹರಿಣ ಪಡೆ ವಿರುದ್ಧ ಶತಕ ಗಳಿಸುವುದರೊಂದಿಗೆ ಸಂಜು ಸ್ಯಾಮ್ಸನ್ ಟಿ20 ತಂಡದಲ್ಲಿ ಆಯ್ಕೆಯಾಗಲು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅನುಭವಿ ಕೆಎಲ್ ರಾಹುಲ್ ಭಾರತದ ಆಯ್ಕೆಗಾರರಿಗೆ ಲಭ್ಯವಿರುವ ಮತ್ತೊಂದು ಆಯ್ಕೆಯಾಗಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ರವೀಂದ್ರ ಜಡೇಜಾ (ಉಪನಾಯಕ), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ.