ಸುದೀರ್ಘ ಕಾಯುವಿಕೆಯ ನಂತರ ವಿರಾಟ್ ಕೊಹ್ಲಿ ಭಾನುವಾರ, ಜನವರಿ 14ರಂದು ಟಿ20 ಕ್ರಿಕೆಟ್ಗೆ ಮರಳಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ 2022ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಕೊನೆಯ ಬಾರಿಗೆ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
2024ರ ಟಿ20 ವಿಶ್ವಕಪ್ಗೆ ಮುನ್ನ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಆಡುತ್ತಿರುವ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿಗೆ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ನಾಯಕ ರೋಹಿತ್ ಶರ್ಮಾ ಕೂಡ ಟಿ20 ಕ್ರಿಕೆಟ್ಗೆ ಹಿಂದಿರುಗಿದ್ದಾರೆ ಮತ್ತು ಮೊದಲ ಪಂದ್ಯದಲ್ಲಿ ಆಡಿದ್ದಾರೆ.

ಇನ್ನು ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಅವರು ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕಾಗಿ ಮರಳಲಿದ್ದಾರೆ. ಇಂದೋರ್ಗೆ ನಿರ್ಗಮಿಸುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ನಿರ್ಗಮನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದಾಗ್ಯೂ, ಅಭಿಮಾನಿಗಳು ಅವರ ಮರ್ಸಿಡಿಸ್ ಬೆಂಜ್ ಕಾರಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು, ಕೆಲವರು ಇದನ್ನು 'ಬೀಸ್ಟ್' ಎಂದು ಕರೆದಿದ್ದಾರೆ.
ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ ಸಬಾ ಕರೀಮ್, ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಅಗತ್ಯವಿದೆ. ವೆಸ್ಟ್ ಇಂಡೀಸ್ನ ಪಿಚ್ಗಳನ್ನು ಪರಿಗಣಿಸಿ, ವಿರಾಟ್ ಕೊಹ್ಲಿ ತಮ್ಮ ಪರಿಚಿತ ಪಾತ್ರಕ್ಕೆ ಅಂಟಿಕೊಳ್ಳಬೇಕು ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ಗೆ ಬರುತ್ತಾರೆ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವ ಬಲವಾದ ಸಾಧ್ಯತೆಯಿದೆ. ನಾನು ವಿರಾಟ್ ಕೊಹ್ಲಿಯನ್ನು ನಂ.3ರಲ್ಲಿ ನೋಡುತ್ತಿದ್ದೇನೆ. ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಆಡುವುದನ್ನು ಗಮನದಲ್ಲಿಟ್ಟುಕೊಂಡು, ಭಾರತ ನಿಧಾನಗತಿಯ ವಿಕೆಟ್ಗಳಲ್ಲಿ ಆಡಬೇಕಿದೆ," ಎಂದು ಸಬಾ ಕರೀಮ್ ತಿಳಿಸಿದರು.
"ನಿಮಗೆ ಸಂಪೂರ್ಣ ಇನ್ನಿಂಗ್ಸ್ ಅನ್ನು ನಿಯಂತ್ರಿಸುವ ಯಾರಾದರೂ ಬೇಕು ಮತ್ತು ರೋಹಿತ್ ಶರ್ಮಾ ಆ ಪಾತ್ರವನ್ನು ನಿರ್ವಹಿಸಲು ವಿರಾಟ್ ಕೊಹ್ಲಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. 3ನೇ ಕ್ರಮಾಂಕದಲ್ಲಿ ಆಡಬೇಕು ಮತ್ತು ಇನ್ನಿಂಗ್ಸ್ ನಿಯಂತ್ರಿಸಸಬೇಕು, ಕೊನೆಯವರೆಗೂ ಮುಂದಾಳತ್ವ ವಹಿಸಬೇಕು".
"ಅದು ಟಾರ್ಗೆಟ್ ನೀಡುವುದಾಗಿರಲಿ ಅಥವಾ ಚೇಸಿಂಗ್ ಆಗಿರಲಿ, ವಿರಾಟ್ ಕೊಹ್ಲಿ ಹಿಂತಿರುಗಿದ ನಂತರ, ನಾನು ಅವರನ್ನು 3ನೇ ಕ್ರಮಾಂಕದಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ," ಎಂದು ಸಬಾ ಕರೀಮ್ ಸ್ಟಾರ್ ಸ್ಪೋರ್ಟ್ಸ್ನ ವಿಶ್ಲೇಷಣೆಯಲ್ಲಿ ಹೇಳಿದರು.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದ ಬಗ್ಗೆ ಹೇಳುವುದಾದರೆ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಆಟಗಾರರು ಆರು ವಿಕೆಟ್ಗಳ ಗೆಲುವು ದಾಖಲಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಮೊಹಮ್ಮದ್ ನಬಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 158 ರನ್ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.
159 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಶಿವಂ ದುಬೆ ಅವರ ಅರ್ಧಶತಕ, ಶುಭ್ಮನ್ ಗಿಲ್, ತಿಲಕ್ ವರ್ಮಾ ಜಿತೇಶ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ 17.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.