
ಶುಕ್ರವಾರ, ಮಾರ್ಚ್ 26ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 189 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 39.5 ಓವರ್ಗಳ 5 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ.
ಭಾರತ ತಂಡದ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಕೆಎಲ್ ರಾಹುಲ್, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ದೊಡ್ಡ ಪಾತ್ರ ವಹಿಸಿದರು.
ಭಾರತದ ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. 2 ಓವರ್ಗಳಲ್ಲಿ 5 ರನ್ ಆಗಿದ್ದಾಗ ಇಶಾನ್ ಕಿಶನ್ (3 ರನ್) ಮಾರ್ಕಸ್ ಸ್ಟೋಯಿನಿಸ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ (4 ರನ್) ಔಟಾಗಿ ಹೊರ ನಡೆದರು.

ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತಿದರೆ, ಶುಭ್ಮನ್ ಗಿಲ್ 20 ರನ್ ಗಳಿಸಿ ವಿಕೆಟ್ ನೀಡಿದರು. ಆಗ ತಂಡದ ಮೊತ್ತ 39 ರನ್ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆಗ ಜೊತೆಯಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ನಿಧಾನಗತಿ ಬ್ಯಾಟಿಂಗ್ ಮೂಲಕ ಇನ್ನಿಂಗ್ಸ್ ಕಟ್ಟಿದರು. ಇದರ ಜೊತೆಗೆ ಸ್ಕೋರ್ ಬೋರ್ಡ್ನಲ್ಲಿ ರನ್ ಹೆಚ್ಚುವಂತೆ ನೋಡಿಕೊಂಡರು.
ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ 44 ರನ್ಗಳ ಜೊತೆಯಾಟ ನೀಡಿದರು. ಆಗ ತಂಡದ ಮೊತ್ತ 83 ರನ್ಗಳಾಗಿದ್ದಾಗ 25 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಔಟಾದರು. ನಂತರ, ಕೆಎಲ್ ರಾಹುಲ್ಗೆ ಜೊತೆಗೂಡಿದ ರವೀಂದ್ರ ಜಡೇಜಾ ಗೆಲುವಿನ ರನ್ ಬಾರಿಸುವವರೆಗೂ ಕ್ರೀಸ್ನಲ್ಲಿದ್ದರು.

ಅಂತಿಮವಾಗಿ, ಕೆಎಲ್ ರಾಹುಲ್ 91 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಬಾರಿಸಿದರೆ, ರವೀಂದ್ರ ಜಡೇಜಾ 69 ಎಸೆತಗಳಲ್ಲಿ 45 ರನ್ ಗಳಿಸಿದರು. ಇವರಿಬ್ಬರು ಮುರಿಯದ ಆರನೇ ವಿಕೆಟ್ಗೆ 108 ರನ್ಗಳನ್ನು ಒಟ್ಟುಗೂಡಿಸಿದರು.
ಬೌಲಿಂಗ್ನಲ್ಲಿ ಆಸ್ಟ್ರೇಲಿಯಾ ತಂಡದ ಪರ ವೇಗಿ ಮಿಚೆಲ್ ಸ್ಟಾರ್ಕ್ 9.5 ಓವರ್ಗಳಲ್ಲಿ 49 ರನ್ ನೀಡಿ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೋಯಿನಿಸ್ 7 ಓವರ್ಗಳಲ್ಲಿ 27 ರನ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡ 35.4 ಓವರ್ಗಳಲ್ಲಿ 188 ರನ್ಗಳಿಗೆ ಸರ್ವಪತನ ಕಂಡಿತು. ಆಸೀಸ್ ಪರ ಮಿಚೆಲ್ ಮಾರ್ಷ್ 65 ಎಸೆತಗಳಲ್ಲಿ 81 ರನ್ ಬಾರಿಸಿದರೆ, ಸ್ಟೀವನ್ ಸ್ಮಿತ್ 22 ರನ್, ಮಾರ್ನಸ್ ಲ್ಯಾಬುಶ್ಚಾಗ್ನೆ 15 ರನ್, ಜೋಶ್ ಇಂಗ್ಲಿಸ್ 26 ರನ್, ಕ್ಯಾಮೆರಾನ್ ಗ್ರೀನ್ 12 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಭಾರತದ ಪರ ಮೊಹಮ್ಮದ್ ಶಮಿ 6 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 5.4 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್, ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.