
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಎರಡೂ ತಂಡಗಳ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ ಪ್ರವಾಸಿ ತಂಡ 1 ರನ್ ಮುನ್ನಡೆ ಸಾಧಿಸಿತು.
ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ಗಳಿಗೆ ಆಲೌಟ್ ಆಗಿದ್ದರೆ, ಪ್ರತ್ಯುತ್ತರವಾಗಿ ಆತಿಥೇಯ ಭಾರತ ತಂಡ ಎರಡನೇ ದಿನದ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 262 ರನ್ಗಳಿಗೆ ಸರ್ವಪತನ ಕಂಡಿತು.
ಎರಡನೇ ದಿನ ಆರಂಭವಾಗುತ್ತಿದ್ದಂತೆಯೇ ಆಸ್ಟ್ರೇಲಿಯಾ ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಅವರು ಭಾರತದ ಆರಂಭಿಕ ನಾಲ್ಕು ವಿಕೆಟ್ ಪಡೆದು ಆಘಾತ ನೀಡಿದರು. ಉಪನಾಯಕ ಕೆಎಲ್ ರಾಹುಲ್ 17 ರನ್ಗಳಿಗೆ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದರೆ, ನಾಯಕ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್ ಆದರು.

ಭಾರತದ ಪರ ಬ್ಯಾಟಿಂಗ್ನಲ್ಲಿ ಅಕ್ಷರ್ ಪಟೇಲ್ 74 ರನ್ ಗಳಿಸಿ ಮಿಂಚಿದರು ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 3ನೇ ಅರ್ಧಶತಕ ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ 44 ರನ್, ರೋಹಿತ್ ಶರ್ಮಾ 32 ರನ್, ರವಿಚಂದ್ರನ್ ಅಶ್ವಿನ್ 37 ರನ್ ಮತ್ತು ರವೀಂದ್ರ ಜಡೇಜಾ 26 ರನ್ ಗಳಿಸಿದರು.
ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಎಂಟನೇ ವಿಕೆಟ್ಗೆ 114 ರನ್ಗಳ ಜೊತೆಯಾಟ ನೀಡಿ ಭಾರತ ತಂಡದ ಹಿನ್ನಡೆ ಅಂತರವನ್ನು ಕೇವಲ 1 ರನ್ಗೆ ತಗ್ಗಿಸಿದರು.
ಇನ್ನು ಎರಡನೇ ದಿನದ ಅಂತಿಮ ಅವಧಿಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 61 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಉಸ್ಮಾನ್ ಖವಾಜಾ 6 ರನ್ ಗಳಿಸಿದ್ದಾಗ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ ಕ್ಯಾಚ್ ನೀಡಿ ಔಟಾದರು.

ಟ್ರಾವಿಸ್ ಹೆಡ್ 39 ರನ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ 16 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ ಎರಡನೇ ದಿನದಾಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 62 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಇದಕ್ಕೂ ಮುನ್ನ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಹಾಗೂ 132 ರನ್ಗಳ ಭರ್ಜರಿ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.