
ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಂದು ಇಂದೋರ್ನಲ್ಲಿ ಆರಂಭವಾಗಿದ್ದು, ಆತಿಥೇಯ ಬ್ಯಾಟ್ಸ್ಮನ್ಗಳು ನಿರಾಶಾದಾಯಕ ಪ್ರದರ್ಶನ ನೀಡಿದ ಕಾರಣ ಮೊದಲ ಇನ್ನಿಂಗ್ಸ್ನಲ್ಲಿ ಸಾಧಾರಣ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆಸ್ಟ್ರೇಲಿಯಾ ಸ್ಪಿನ್ನರ್ಗಳಾದ ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ ಸ್ಪಿನ್ ಬಲೆಗೆ ಸಿಲುಕಿ ಮೊದಲ ಇನ್ನಿಂಗ್ಸ್ನಲ್ಲಿ 33.2 ಓವರ್ಗಳಲ್ಲಿ 109 ರನ್ಗಳಿಗೆ ಅಲೌಟ್ ಆಯಿತು. ಕೆಎಲ್ ರಾಹುಲ್ ಬದಲಿಗೆ ಅವಕಾಶ ಪಡೆದು ಆಡಿದ ಶುಭ್ಮನ್ ಗಿಲ್ 21 ರನ್ ಗಳಿಸಿ ಔಟಾದರು.
ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರು ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ತಾನು ಭಾರತೀಯ ತಂಡದ ನಾಯಕನಾಗಿದ್ದರೆ ಕೆಎಲ್ ರಾಹುಲ್ಗಾಗಿ ಹಠ ಹಿಡಿಯುತ್ತಿದ್ದೆ ಎಂದು ಹೇಳಿದ್ದಾರೆ.

ರೇವ್ಸ್ಪೋರ್ಟ್ಸ್ ಜೊತೆ ಮಾತನಾಡಿದ ಮೈಕಲ್ ಕ್ಲಾರ್ಕ್, "ತಾನು ಕೆಎಲ್ ರಾಹುಲ್ ಅತ್ಯಂತ ಪ್ರತಿಭಾನ್ವಿತ ಆಟಗಾರ, ಅವರ ಆಟವನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಮತ್ತು ನಾನು ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ ಸ್ಥಾನದಲ್ಲಿದ್ದರೆ ರಾಹುಲ್ ತಂಡದಲ್ಲಿರಬೇಕೆಂದು ಬಯಸುತ್ತಿದ್ದೆ," ಎಂದು ತಿಳಿಸಿದರು.
"ಭಾರತ ತಂಡ ಪಂದ್ಯಗಳನ್ನು ಗೆಲ್ಲುತ್ತಿರುವುದರಿಂದ ಕೆಎಲ್ ರಾಹುಲ್ ತನ್ನ ಲಯ ಕಂಡುಕೊಳ್ಳುವವರೆಗೆ ಆತನನ್ನು ಕೈಬಿಡದಂತೆ ಭಾರತ ತಂಡದ ಮ್ಯಾನೇಜ್ಮೆಂಟ್ಗೆ ಹೇಳುತ್ತಿದ್ದೆ. ಶೀಘ್ರದಲ್ಲೇ ಕೆಎಲ್ ರಾಹುಲ್ ಅದ್ಭುತವಾಗಿ ಕಂ-ಬ್ಯಾಕ್ ಮಾಡಲಿದ್ದಾರೆ," ಎಂದು ಮೈಕಲ್ ಕ್ಲಾರ್ಕ್ ಹೇಳಿದರು.
ಭಾರತ ತಂಡವು ಕೆಎಲ್ ರಾಹುಲ್ ಭವಿಷ್ಯದಲ್ಲಿ ತಮ್ಮ ಅತ್ಯುತ್ತಮ ಆಟಗಾರನಾಗಬಹುದೆಂದು ನಂಬಿದ್ದರೆ, ಆತನನ್ನು ಉಳಿಸಿಕೊಳ್ಳಬೇಕು ಎಂದು 41ರ ಹರೆಯದ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟರು.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಉಪನಾಯಕರಾಗಿ ನೇಮಕಗೊಂಡ ಕೆಎಲ್ ರಾಹುಲ್, ಮೂರು ಇನ್ನಿಂಗ್ಸ್ಗಳಲ್ಲಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾದರು.
ಭಾರತ ತಂಡದ ಆರಂಭಿಕ ಬ್ಯಾಟರ್ ತಮ್ಮ ಕೊನೆಯ ಏಳು ಇನ್ನಿಂಗ್ಸ್ಗಳಲ್ಲಿ 22, 23, 10, 2, 20, 17 ಮತ್ತು 1 ರನ್ಗಳನ್ನು ಗಳಿಸಿದ್ದಾರೆ. ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿ ಕೊನೆಯ ಬಾರಿಗೆ ಜನವರಿ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ಬರ್ಗ್ನಲ್ಲಿ ಅರ್ಧಶತಕ ಗಳಿಸಿದ್ದರು. ರಾಹುಲ್ ಕೊನೆಯ ಟೆಸ್ಟ್ ಶತಕ ಡಿಸೆಂಬರ್ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಂದಿತ್ತು.