
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಂದು ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಆತಿಥೇಯ ಭಾರತ ತಂಡ ಈಗಾಗಲೇ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಮೂರನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದ್ದು, ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಸ್ಥಾನವನ್ನು ಹಲವು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ. ಇದು ಅದ್ಭುತ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಇದೇ ವೇಳೆ ಭಾರತ ತಂಡದ ವಿಕೆಟ್ ಕೀಪರ್- ಬ್ಯಾಟರ್ ಆಗಿರುವ ಕೆಎಸ್ ಭರತ್ ಸದ್ಯ ನಡೆಯುತ್ತಿರುವ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ವಿಫಲವಾಗಿದ್ದರೆ, ಕೀಪಿಂಗ್ನಲ್ಲಿ ಮಿಂಚಿದ್ದಾರೆ. ಇನ್ನು ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಪ್ರದರ್ಶನವು ಆಡುವ 11ರ ಬಳಗದಲ್ಲಿ ಆಯ್ಕೆಯಾಗುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಏಕೆಂದರೆ ಶುಭ್ಮನ್ ಗಿಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಕೆಎಲ್ ರಾಹುಲ್ ಬದಲಿಗೆ ಶುಭ್ಮನ್ ಗಿಲ್ ಆಯ್ಕೆಯ ಬಗ್ಗೆ ಪ್ರಶ್ನೆ ಕೇಳಿದಾಗ, ಕೆಎಸ್ ಭರತ್ ಪ್ರತಿಕ್ರಿಯಿಸಿ, ಈ ನಿರ್ಧಾರವನ್ನು ತಂಡದ ಮ್ಯಾನೇಜ್ಮೆಂಟ್ಗೆ ಬಿಟ್ಟಿದ್ದಾರೆ. ಹೀಗಾಗಿ ಭಾರತ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಮೂರನೇ ಟೆಸ್ಟ್ ಪಂದ್ಯದ ಪೂರ್ವ ಸಂದರ್ಶನದಲ್ಲಿ ಭಾರತ ತಂಡದ ವಿಧಾನದ ಬಗ್ಗೆ ಕೆಎಸ್ ಭರತ್ ಮಾತನಾಡಿದ್ದು, ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ರನ್ ಗಳಿಸುವ ವಿಧಾನವನ್ನು ಬಹಿರಂಗಪಡಿಸಿದರು.
"ಒಬ್ಬ ಬ್ಯಾಟ್ಸ್ಮನ್ ಆಗಿ ರನ್ ಗಳಿಸುವ ಅವಕಾಶಗಳನ್ನು ಹುಡುಕಬೇಕು. ಅಂತಿಮವಾಗಿ ಪಂದ್ಯದಲ್ಲಿ ರನ್ಗಳ ಮೇಲೆ ಫಲಿತಾಂಶ ನಿರ್ಧರಿತವಾಗುತ್ತದೆ. ಇದನ್ನೇ ತಂಡದ ಮ್ಯಾನೇಜ್ಮೆಂಟ್ ಕೂಡ ನನಗೆ ತಿಳಿಸಿದೆ. ಬ್ಯಾಟ್ಸ್ಮನ್ಗಳ ಉದ್ದೇಶ ಎಂದಿಗೂ ಸಮಸ್ಯೆಯಲ್ಲ, ಆದರೆ ಶಾಟ್ ಆಯ್ಕೆಯು ತುಂಬಾ ಮುಖ್ಯವಾಗಿದೆ," ಎಂದು ಕೆಎಸ್ ಭರತ್ ತಿಳಿಸಿದರು.
"ಪ್ರತಿ ಆಟಗಾರನಿಂದ ಯಾವಾಗಲೂ ರನ್ ಗಳಿಸುವುದನ್ನು ನೀವು ಬಯಸುತ್ತೀರಿ. ಆಟಗಾರರು ಕೂಡ ತಂಡದಲ್ಲಿ ಆಡುವ ಅವಕಾಶ ಪಡೆಯಲು ಕಾಯುತ್ತೇವೆ. ಯಾವುದೇ ಅವಕಾಶಕ್ಕಾಗಿ ನನ್ನನ್ನು ಯಾವಾಗಲೂ ಸಿದ್ಧಪಡಿಸಿಕೊಂಡಿರುತ್ತೇನೆ. ಶಾಟ್ಗಳ ಆಯ್ಕೆ ಮತ್ತು ರನ್ ಗಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಭಾರತ ಎ ತಂಡ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡಿದ್ದರಿಂದ, ಭಾರತ ತಂಡದಲ್ಲಿ ಅವಕಾಶ ಪಡೆದಿದ್ದೇನೆ," ಎಂದು ಕೆಎಸ್ ಭರತ್ ಅಭಿಪ್ರಾಯಪಟ್ಟರು.
ಕೆಎಸ್ ಭರತ್ ಆಡಿದ 88 ಪ್ರಥಮ ದರ್ಜೆ ಪಂದ್ಯಗಳಲ್ಲಿ 9 ಶತಕ ಮತ್ತು 27 ಅರ್ಧಶತಕ ಒಳಗೊಂಡ 4744 ರನ್ ಗಳಿಸಿದ್ದಾರೆ. 64 ಲಿಸ್ಟ್ ಎ ಪಂದ್ಯಗಳಲ್ಲಿ ಕಾಣಿಸಿಕೊಂಡು ಅಜೇಯ 161 ಗರಿಷ್ಠ ಸ್ಕೋರ್ನೊಂದಿಗೆ 1950 ರನ್ ಬಾರಿಸಿದ್ದಾರೆ.
ಭಾರತ ತಂಡದಲ್ಲಿ ಕೆಎಸ್ ಭರತ್ ಸೇರ್ಪಡೆ ಅನಿರೀಕ್ಷಿತವಾಗಿದ್ದರೂ, ಭರತ್ ದೇಶೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಎರಡೂ ಟೆಸ್ಟ್ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಲು ವಿಫಲವಾದರೂ, ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕರೆ, ಖಂಡಿತವಾಗಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದ್ದಾರೆ.