
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದ್ದು ಅಹ್ಮದಾಬಾದ್ನಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಮೂರನೇ ಪಂದ್ಯದಲ್ಲಿ ಭಾರೀ ಸೋಲು ಕಂಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಸ್ಥಾನ ಪಡೆಯಬೇಕಾದರೆ ಅಂತಿಮ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಅಹ್ಮದಾಬಾದ್ ಟೆಸ್ಟ್ ಪಂದ್ಯ ಮಾರ್ಚ್ 9ರಿಂದ ಆರಂಭವಾಗಲಿದ್ದು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕೆಲಸದೊತ್ತಡ ನಿರ್ವಹಿಸುವ ದೃಷ್ಟಿಯಿಂದ ಮೊಹಮ್ಮದ್ ಶಮಿಗೆ ಮೂರನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಶಮಿ ಬದಲಿಗೆ ಉಮೇಶ್ ಯಾದವ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದರು.
ಏಕದಿನ ವಿಶ್ವಕಪ್ ಯೋಜನೆಯ ಭಾಗವಾಗಿರುವ ಆಟಗಾರರಿಗೆ ಹಾಗೂ ಐಪಿಎಲ್ನಲ್ಲಿ ಸಕ್ರಿಯವಾಗಲಿರುವ ಕಾರಣದಿಂದಾಗಿ ವೇಗಿಗಳಿಗೆ ಬೇಕಾದ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ಹಾಗೂ ವೈದ್ಯಕೀಯ ಮಂಡಳಿ ನಿರ್ಧರಿಸಿದೆ. ಹೀಗಾಗಿ ಮೊಹಮ್ಮದ್ ಶಮಿ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯೂ ಶಮಿ ಭಾರತದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಟೆಸ್ಟ್ಪಂದ್ಯದಲ್ಲಿ ಶಮಿ ಬದಲಿಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದ ಉಮೇಶ್ ಯಾದವ್ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದರು. ಐದು ಓವರ್ಗಳಲ್ಲಿ 12 ರನ್ಗಳನ್ನು ನೀಡಿ ಮೂರು ವಿಕೆಟ್ ಪಡೆದುಕೊಂಡರು.
ಇನ್ನು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಈ ಸರಣಿಯಲ್ಲಿ ಸಿರಾಜ್ ಕೇವಲ 24 ಓವರ್ಗಳ ಬೌಲಿಂಗ್ ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿಯೂ ಸಿರಾಜ್ ಆಡುವ ಸಾಧ್ಯತೆಯಿರುವ ಕಾರಣ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.
ವೇಗಿ ಮೊಹಮ್ಮದ್ ಶಮಿ ಈ ಸರಣಿಯಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಶಮಿ 7 ವಿಕೆಟ್ ಪಡೆದುಕೊಂಡಿದ್ದರು. ಅಹ್ಮದಾಬಾದ್ನ ಒಣಪಿಚ್ನಲ್ಲಿ ಮೊಹಮ್ಮದ್ ಶಮಿಯ ಅಗತ್ಯ ಭಾರತ ತಂಡಕ್ಕೆ ಇದ್ದು ರಿವರ್ಸ್ಸ್ವಿಂಗ್ನಲ್ಲಿ ಸಹಕಾರಿಯಾಗಬಹುದು. ಈ ಸರಣಿಯಲ್ಲಿ ಭಾರತ ಸದ್ಯ 2-1 ಅಂತರದಿಂದ ಮುನ್ನಡೆಯಲ್ಲಿದ್ದು ಅಂತಿಮ ಪಂದ್ಯ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಸ್ಥಾನವನ್ನು ಖಚಿತ ಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.