
ಶನಿವಾರ, ಮಾರ್ಚ್ 11ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಸುದೀರ್ಘ ದಿನಗಳ ಬಳಿಕ ಉತ್ತಮ ಫಾರ್ಮ್ ಅನ್ನು ಕಂಡುಕೊಂಡರು. ನಂತರ ತಮ್ಮ 29ನೇ ಟೆಸ್ಟ್ ಅರ್ಧಶತಕವನ್ನು ಬಾರಿಸಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ರನ್ಗಳಿಗಾಗಿ ಪರದಾಡುತ್ತಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಶನಿವಾರದಂದು ತಮ್ಮ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಸದ್ಯ 128 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ಸಹಾಯದಿಂದ ಅಜೇಯ 59 ರನ್ ಗಳಿಸಿದ್ದು, ಭಾರತ ತಂಡವು 3 ವಿಕೆಟ್ಗೆ 289 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.
ಮೂರನೇ ದಿನದಾಟದ ನಂತರ ಮಾತನಾಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು. ಅಲ್ಲದೇ, ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವುದನ್ನು ನಾವು ನೋಡಬಹುದು ಎಂದು ಹೇಳಿದರು.

ವಿರಾಟ್ ಕೊಹ್ಲಿ ದ್ವಿಶತಕ ಬಾರಿಸಿದರೆ ಭಾರತ ಮುನ್ನಡೆ ಸಾಧಿಸುತ್ತದೆ, ಆಗ ಪಂದ್ಯವನ್ನು ಗೆಲ್ಲುವ ಅವಕಾಶವಿರುತ್ತದೆ ಎಂದು ಭಾರತೀಯ ಕ್ರಿಕೆಟ್ ಲೆಜೆಂಡ್ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
"ಪಿಚ್ನ ವರ್ತನೆಯನ್ನು ನೋಡಿದ ನಂತರ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದ ರೀತಿ ಉತ್ತಮವಾಗಿದೆ. ಈ ಅರ್ಧಶತಕವನ್ನು ದ್ವಿಶತಕವಾಗಿ ಪರಿವರ್ತಿಸಬಹುದು ಎಂದು ನಾನು ಭಾವಿಸುತ್ತೇನೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರು ಮುನ್ನಡೆ ಸಾಧಿಸಿದರೆ, ಪಂದ್ಯ ಗೆಲ್ಲುವ ಅವಕಾಶವಿದೆ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
"ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಬ್ಯಾಟಿಂಗ್ ಫಾರ್ಮ್ ಮೂಲಕ ಸಾಗುತ್ತಿದ್ದಾರೆ. ಏಕೆಂದರೆ, ಆತ ಕಳೆದ ಕೆಲವು ವರ್ಷಗಳಿಂದ ಶತಕವನ್ನು ಗಳಿಸಿಲ್ಲ. ರನ್ಗಳ ಹಸಿವು ನೀಗಿಸಿಕೊಳ್ಳಬೇಕಾದರೆ ಕನಿಷ್ಠ 250 ರನ್ ಗಳಿಸುವುದು ಉತ್ತಮ ಮಾರ್ಗವಾಗಿದೆ," ಎಂದು ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಹೇಳಿದರು.

ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ 235 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 128 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಎರಡನೇ ಶತಕವಾಗಿದೆ. ಚೇತೇಶ್ವರ ಪೂಜಾರ 42 ರನ್ ಗಳಿಸಿ ಉತ್ತಮ ಸಾಥ್ ನೀಡಿದ್ದರು.
ಶನಿವಾರದ ಮೊದಲ ಅವಧಿಯಲ್ಲಿ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ರವೀಂದ್ರ ಜಡೇಜಾ ಬಡ್ತಿ ಬಂದು ಔಟಾಗದೇ 16 ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.