
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಂದು ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಆತಿಥೇಯ ಭಾರತ ತಂಡ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡಕ್ಕೆ ಆರಂಭಿಕ ಕೆಎಲ್ ರಾಹುಲ್ ಬ್ಯಾಟಿಂಗ್ ಫಾರ್ಮ್ ಚಿಂತೆ ಹೊರತುಪಡಿಸಿ ಎಲ್ಲವೂ ಅವರಿಗೆ ಚೆನ್ನಾಗಿ ಸಾಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ವೈಟ್ವಾಶ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದ್ದರೆ, ಮತ್ತೊಂದೆಡೆ ಎರಡೂ ಪಂದ್ಯಗಳನ್ನು ಸೋತು ಗಾಯಾಳು ಪಡೆ ಹೊಂದಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಉತ್ಸಾಹವೇ ಇಲ್ಲದಂತಾಗಿದೆ. ಆದರೂ ಸರಣಿ ಸಮಬಲ ಮಾಡಿಕೊಳ್ಳಲು ಕಠಿಣ ಹೋರಾಟ ನಡೆಸಬೇಕಿದೆ.

ಎರಡು ಟೆಸ್ಟ್ ಪಂದ್ಯಗಳ ನಂತರ, ಭಾರತ ತಂಡಕ್ಕೆ ಕಾಡುತ್ತಿರುವ ಏಕೈಕ ಸಮಸ್ಯೆಯೆಂದರೆ ಅದು ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಪ್ರದರ್ಶನ. ಎದುರಾಳಿ ಬೌಲರ್ಗಳ ವಿರುದ್ಧ ಪ್ರತಿರೋಧ ಒಡ್ಡದೇ ವಿಕೆಟ್ ಒಪ್ಪಿಸುತ್ತಿರುವುದು ಕಳವಳಕಾರಿಯಾಗಿದೆ ಮತ್ತು ಅವರ ಸ್ಥಾನವನ್ನು ಪ್ರಶ್ನಿಸುವಂತಾಗಿದೆ.
ನಿರ್ಣಾಯಕ ಪಂದ್ಯದ ಮೊದಲು, ಭಾರತದ ಮಾಜಿ ಬ್ಯಾಟರ್ ಮತ್ತು ಈಗ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಮೂರನೇ ಟೆಸ್ಟ್ನಲ್ಲಿ ನಾಯಕ ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಜೋಡಿ ಇನ್ನಿಂಗ್ಸ್ ತೆರೆಯುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿದ್ದಾರೆ.
ಇದೀಗ ನಿರ್ಣಾಯಕ ಇಂದೋರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮತ್ತು ಕಾಮೆಂಟೆಟರ್ ಆಕಾಶ್ ಚೋಪ್ರಾ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಯುವ ಆಟಗಾರ ಶುಭ್ಮನ್ ಗಿಲ್ ಇನ್ನಿಂಗ್ಸ್ ತೆರೆಯಲಿದ್ದಾರೆ ಎಂದು ತಿಳಿಸಿದ್ದು, ಹೀಗಾಗಿ ಕೆಎಲ್ ರಾಹುಲ್ ಅವರನ್ನು ತಮ್ಮ ಆಯ್ಕೆಯ ಆಡುವ 11ರ ಬಳಗದಿಂದ ಹೊರಗಿಟ್ಟಿದ್ದಾರೆ.

ಜಿಯೋ ಸಿನಿಮಾದಲ್ಲಿ ತಮ್ಮ ಕಾರ್ಯಕ್ರಮವಾದ ಆಕಾಶ್ವಾಣಿಯಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, "ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡಕ್ಕೆ ಉಪನಾಯಕ ಇಲ್ಲವಾದರೆ, ಪ್ರವಾಸಿ ತಂಡಕ್ಕೆ ನಾಯಕನೇ ಇಲ್ಲದಂತ ಪರಿಸ್ಥಿತಿ ಇದೆ," ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾಕ್ಕೆ, ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದರೆ, ಭಾರತ ತಂಡದ ಸಂಭಾವ್ಯ ಆಡುವ ಹನ್ನೊಂದರ ಬಳಗದಲ್ಲಿ ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಇರಲಿದ್ದಾರೆ ಮತ್ತು ಇನ್ನೊಂದು ಸ್ಥಾನವನ್ನು ಕೆಎಲ್ ರಾಹುಲ್ ಬದಲಿಗೆ ಶುಭ್ಮನ್ ಗಿಲ್ ತುಂಬಲಿದ್ದಾರೆ.
"ಬಲಗೈ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅವರು ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಬೆಂಬಲದಿಂದ ತಂಡದಲ್ಲಿದ್ದಾರೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
"ಕಳಪೆ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಮುಂದಿನ ಪಂದ್ಯಗಳಲ್ಲಿ ತಂಡದ ಭಾಗವಾಗುವುದಿಲ್ಲ ಮತ್ತು ಆತನ ಸ್ಥಾನವನ್ನು ಶುಭ್ಮನ್ ಗಿಲ್ ತುಂಬುವ ಸಮಯ ಬಂದಿದೆ. ಹೀಗಾಗಿ ನಾನು ಶುಭ್ಮನ್ ಗಿಲ್ಗೆ ಶುಭ ಹಾರೈಸುತ್ತೇನೆ. ನಾವು ಭಾರತ ತಂಡದ ದೃಷ್ಟಿಕೋನದಿಂದ ನೋಡಿದಾಗ ದೊಡ್ಡ ಮೊತ್ತ ಗಳಿಸಲು ಇದು ಉತ್ತಮ ಸಮಯ," ಎಂದು ಆಕಾಶ್ ಚೋಪ್ರಾ ತಿಳಿಸಿದರು.