
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯ ಗುರುವಾರ, ಮಾರ್ಚ್ 9ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೇಲುಗೈ ಸಾಧಿರುವ ರೋಹಿತ್ ಶರ್ಮಾ ನಾಯಕತ್ವದ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಗಳಿಸಿದೆ. ಹೀಗಾಗಿ ಭಾರತಕ್ಕೆ ಸರಣಿ ಗೆಲ್ಲಲು ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಇದೇ ವೇಳೆ ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳ ಫಾರ್ಮ್ ಸಮಸ್ಯೆ ಕಾಡುತ್ತಿದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿ ಇದೆ.
ಈ ಕುರಿತು ಭಾರತ ತಂಡಕ್ಕೆ ಸಲಹೆ ನೀಡಿರುವ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಇಬ್ಬರನ್ನೂ ಒಂದೇ ತಂಡದಲ್ಲಿ ಆಡಿಸುವಂತೆ ಒತ್ತಾಯಿಸಿದ್ದಾರೆ.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಉತ್ತಮ ಅರಂಭ ಒದಗಿಸಲು ವಿಫಲರಾದ ಕೆಎಲ್ ರಾಹುಲ್ ಅವರನ್ನು ಬದಲಾಯಿಸಿ ಮೂರನೇ ಪಂದ್ಯದಲ್ಲಿ ಸುಭ್ಮನ್ ಗಿಲ್ಗೆ ಅವಕಾಶ ನೀಡಲಾಯಿತು. ಆದರೆ, ಅವರೂ ಎರಡೂ ಇನ್ನಿಂಗ್ಸ್ನಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಇದೀಗ ನಾಲ್ಕನೇ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೇಲೆ ಕಣ್ಣಿಟ್ಟಿರುವ ಭಾರತ ತಂಡಕ್ಕೆ, ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿ, ಕೆಎಲ್ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ.
"ಕೆಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ಇಬ್ಬರೂ ಸ್ವಲ್ಪಮಟ್ಟಿಗೆ ಟೆಸ್ಟ್ ಕ್ರಿಕೆಟ್ ಆಡಿರುವುದರಿಂದ, ಆಸ್ಟ್ರೇಲಿಯಾ ವಿರುದ್ಧ ನಾಲಕ್ನೇ ಪಂದ್ಯದಲ್ಲಿ ಇಬ್ಬರನ್ನೂ ಒಂದೇ ತಂಡದಲ್ಲಿ ಆಡಿಸಬಹುದು," ಎಂದು ಐಸಿಸಿ ವಿಮರ್ಶೆಯಲ್ಲಿ ರಿಕಿ ಪಾಂಟಿಂಗ್ ತಿಳಿಸಿದರು.
"ಶುಭ್ಮನ್ ಗಿಲ್ ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಆರಂಭಿಸಬಹುದು ಮತ್ತು ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಈ ಮೊದಲು ಇವರಿಬ್ಬರು ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಆಡಿದ್ದಾರೆ. ಆದರೆ ಅಲ್ಲಿನ ಪಿಚ್ ಬಗ್ಗೆ ನಮಗೆ ತಿಳಿದಿರುವ ಒಂದು ವಿಷಯವೆಂದರೆ, ಚೆಂಡು ಹಗಲಿನಲ್ಲಿ ದೀರ್ಘಾವಧಿಯವರೆಗೆ ಸ್ವಿಂಗ್ ಆಗುತ್ತದೆ," ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.

ಅಂತಿಮವಾಗಿ, ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ಎರಡೂ ತಂಡಗಳು ಇಂಗ್ಲೆಂಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ತಮ್ಮ ಅತ್ಯುತ್ತಮ ಆಡುವ 11ರ ಬಳಗವನ್ನು ಆಯ್ಕೆ ಮಾಡಬೇಕು ಎಂದು ರಿಕಿ ಪಾಂಟಿಂಗ್ ತಿಳಿಸಿದರು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮರಳಿ ಫಾರ್ಮ್ಗೆ ಮರಳಿ ಭಾರತ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿತು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಸದ್ಯ ಸರಣಿಯಲ್ಲಿ 1-2 ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡ, ಮಾರ್ಚ್ 9ರಿಂದ ಪ್ರಾರಂಭವಾಗುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ಗುರಿಯನ್ನು ಹೊಂದಿದೆ. ಇದೇ ವೇಳೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಬೇಕಾದರೆ, ಗೆಲುವು ಅನಿವಾರ್ಯವಾಗಿದೆ.