
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ, ಫೆಬ್ರವರಿ 9ರಿಂದ ಆರಂಭಗೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡ 177 ರನ್ಗಳಿಗೆ ಸರ್ವಪತನ ಕಂಡಿತು. ನಂತರ ಬ್ಯಾಟಿಂಗ್ ಆರಂಭಿಸಿರುವ ಆತಿಥೇಯ ಭಾರತ ತಂಡ, ಎರಡನೇ ದಿನದ ಊಟದ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಬೌಲಿಂಗ್ನಲ್ಲಿ ಟಾಡ್ ಮರ್ಫಿ 15 ಓವರ್ಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.
ಇದೀಗ ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಶೈಲಿಯನ್ನು ಭಾರತದ ಲೆಜೆಂಡರಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಿಗೆ ಹೋಲಿಸಿ ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ಭಾರತದ ನಾಯಕ ರೋಹಿತ್ ಶರ್ಮಾ ಅರ್ಧಶತಕ ದಾಖಲಿಸಿ, ಫಾರ್ಮ್ಗೆ ಮರಳಿರುವ ಸೂಚನೆ ನೀಡಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ 142 ಎಸೆತಗಳಲ್ಲಿ 85 ರನ್ ಗಳಿಸಿ ವಿರಾಟ್ ಕೊಹ್ಲಿಯೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
ರೋಹಿತ್ ಶರ್ಮಾ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ನಂತೆಯೇ ಇರುತ್ತದೆ. ಇದು ಭಾರತದ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಲೈನ್ಅಪ್ಗೆ ಸಹಾಯವಾಗುತ್ತದೆ, ಎಂದು ಐಸಿಸಿ ವಿಮರ್ಶೆಯಲ್ಲಿ ರವಿಶಾಸ್ತ್ರಿ ಮಾತನಾಡಿದರು.

"ರೋಹಿತ್ ಶರ್ಮಾ ಕ್ರೀಸ್ನಲ್ಲಿರುತ್ತಾನೆ ಮತ್ತು ತ್ವರಿತವಾಗಿ ರನ್ ಗಳಿಸಲು ಎದುರು ನೋಡುತ್ತಾನೆ. ಆತ ಯಾವುದೇ ಬೌಲರ್ಗೆ ನೆಲೆಗೊಳ್ಳಲು ಬಿಡುವುದಿಲ್ಲ. ವೀರೇಂದ್ರ ಸೆಹ್ವಾಗ್ನಂತೆ ಸುಲಭವಾಗಿ ರನ್ಗಳು ಬರುತ್ತವೆ. ವೀರೇಂದ್ರ ಸೆಹ್ವಾಗ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾಗ ಎದುರಾಳಿಗಳ ಮೇಲೆ ಒತ್ತಡ ಹೇರಿ, ಮಧ್ಯಮ ಕ್ರಮಾಂಕದ ಕೆಲಸವನ್ನು ಸುಲಭವಾಗಿರಿಸುತ್ತಿದ್ದರು," ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ತಿಳಿಸಿದರು.
ಸದ್ಯ ನಡೆಯುತ್ತಿರುವ 2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ರೋಹಿತ್ ಶರ್ಮಾ ಅವರ ನಾಯಕತ್ವದ ಪರೀಕ್ಷೆಯಾಗಿರುವುದಿಲ್ಲ ಎಂದು ಹೇಳಿದ ರವಿಶಾಸ್ತ್ರಿ, ನಾಯಕನಾಗಿ ಸಾಬೀತುಪಡಿಸಲು ಏನೂ ಇಲ್ಲ. ಆದರೆ, ಆರಂಭಿಕ ಆಟಗಾರನಾಗಿ ತಂಡದ ಮೇಲಿನ ಒತ್ತಡವನ್ನು ತಗ್ಗಿಸಬೇಕು. ಅದನ್ನು ರೋಹಿತ್ ಶರ್ಮಾ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.