
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಂದು ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಆತಿಥೇಯ ಭಾರತ ತಂಡ ಈಗಾಗಲೇ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಪಂದ್ಯವನ್ನು ಗೆದ್ದು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಸ್ಥಾನವನ್ನು ಹಲವು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ. ಇದು ಅದ್ಭುತ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಇನ್ನು ಕೆಎಲ್ ರಾಹುಲ್ ಕಳಪೆ ನೀರಸ ಪ್ರದರ್ಶನವು ಭಾರತ ತಂಡದ ಆಡುವ 11ರ ಬಳಗದಲ್ಲಿ ಆಯ್ಕೆಯಾಗುವ ಸಾಧ್ಯತೆ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಏಕೆಂದರೆ ಶುಭ್ಮನ್ ಗಿಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಟೆಸ್ಟ್ ಹಾಗೂ ವೈಟ್ಬಾಲ್ ಕ್ರಿಕೆಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಶುಭ್ಮನ್ ಗಿಲ್ರನ್ನು ಹೊರಗಿಡಲಾಗಿತ್ತು. ಭಾರತ ತಂಡದ ಆಯ್ಕೆಗಾರರು ಅಗ್ರ ಕ್ರಮಾಂಕದಲ್ಲಿ ಅನುಭವಿ ಆಟಗಾರನಿಗೆ ಆದ್ಯತೆ ನೀಡಿದ್ದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಶುಭ್ಮನ್ ಗಿಲ್, ಕಳೆದ ಜನವರಿಯಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 208 ರನ್ಗಳ ಅಮೋಘ ದ್ವಿಶತಕ ಸೇರಿದಂತೆ ಭಾರತ ತಂಡದ ಪರ ನಾಲ್ಕು ಶತಕ ಬಾರಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

"ಶುಭ್ಮನ್ ಗಿಲ್ ಸದ್ಯಕ್ಕೆ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ ಮತ್ತು ರನ್ ಮಾಡಿದರೂ, ಮಾಡದಿದ್ದರೂ ಫಾರ್ಮ್ ಅರ್ಹತೆಯ ಮೇಲೆ ಗಿಲ್ ಅವಕಾಶಕ್ಕೆ ಅರ್ಹರು," ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.
"ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೆ ಕೆಎಲ್ ರಾಹುಲ್ ಫಾರ್ಮ್ ಮತ್ತು ಆತನ ಮಾನಸಿಕ ಸ್ಥಿತಿ ತಿಳಿದಿದೆ, ಇದೇ ವೇಳೆ ಶುಭ್ಮನ್ ಗಿಲ್ನಂತಹ ಆಟಗಾರನನ್ನು ಹೇಗೆ ನೋಡಬೇಕು ಎಂಬುದು ಅವರಿಗೆ ಗೊತ್ತಿದೆ," ಎಂದು ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.
"ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಕೆಎಲ್ ರಾಹುಲ್ ಬದಲಾಗಿ ಶುಭ್ಮನ್ ಗಿಲ್ ಆಡಿಸಬಹುದು. ಈಗ ಕೆಎಲ್ ರಾಹುಲ್ ಉಪನಾಯಕನಾಗಿಲ್ಲ. ಆದ್ದರಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಸಮತೋಲನ ತಂಡ ರಚಿಸಲು ಟೀಂ ಮ್ಯಾನೇಜ್ಮೆಂಟ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ," ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ಕೆಲವೊಮ್ಮೆ ಆಟಗಾರರಿಗೆ ವಿಶ್ರಾಂತಿ ನೀಡುವುದು ತುಂಬಾ ಮುಖ್ಯವಾಗಿರುತ್ತದೆ. ಈ ವೇಳೆ ಒತ್ತಡದಿಂದ ಹೊರಬಂದು ಹೆಚ್ಚು ಅಭ್ಯಾಸ ಮಾಡಿ ಬಲವಾಗಿ ಹಿಂತಿರುಗಬಹುದು. ಇಂಗ್ಲೆಂಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಯಿತು, ನಂತರ ಶತಕ ಬಾರಿಸಿ ಹಿಂದಿರುಗಿದರು," ಎಂದು ರವಿಶಾಸ್ತ್ರಿ ಹೇಳಿದರು.
ಅದೇ ರೀತಿ ಕೆಎಲ್ ರಾಹುಲ್ ಅವರನ್ನು 2019ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಿಂದ ಕೈಬಿಡಲಾಗಿತ್ತು ಮತ್ತು ಉತ್ತಮವಾಗಿ ತಂಡಕ್ಕೆ ಮರಳಿದರು ಎಂಬುದನ್ನು ರವಿಶಾಸ್ತ್ರಿ ನೆನಪಿಸಿದರು.