ಭಾನುವಾರ, ಡಿಸೆಂಬರ್ 3ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 6 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದ ನಂತರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಅವರಿಗೆ ಟ್ರೋಫಿ ಎತ್ತುವ ಮೂಲಕ ಭಾರತೀಯ ತಂಡದ ಸಂಪ್ರದಾಯವನ್ನು ಮುಂದುವರೆಸಿದರು. ಸೂರ್ಯಕುಮಾರ್ ಯಾದವ್ ಅವರ ಈ ನಡೆ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ಡಿಸೆಂಬರ್ 3ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಕೊನೆಯ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿತು. ಭಾರತೀಯ ಯುವ ತಂಡವು 4-1 ಮುನ್ನಡೆಯೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿತು.
ಉಪನಾಯಕ ಶ್ರೇಯಸ್ ಅಯ್ಯರ್ ಅವರ ನಿರ್ಣಾಯಕ ಅರ್ಧಶತಕದಿಂದಾಗಿ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ ನಿಗದಿತ 20 ಓವರ್ಗಳಲ್ಲಿ 160 ರನ್ಗಳ ಸವಾಲಿನ ಮೊತ್ತವನ್ನು ಹೊಂದಿಸುವುದರೊಂದಿಗೆ ಪಂದ್ಯವು ರೋಚಕತೆಗೆ ಸಾಕ್ಷಿಯಾಯಿತು.

ಒತ್ತಡದ ನಡುವೆಯೂ, ಭಾರತೀಯ ಬೌಲರ್ಗಳು ಸಂದರ್ಭಕ್ಕೆ ತಕ್ಕಂತೆ ಬೌಲ್ ಮಾಡಿದರು. ವೇಗಿ ಮುಖೇಶ್ ಕುಮಾರ್ ಮೂರು ಪ್ರಮುಖ ವಿಕೆಟ್ಗಳನ್ನು ಪಡೆದರು ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ತಮ್ಮ ಸ್ಪಿನ್ ಪರಾಕ್ರಮ ಪ್ರದರ್ಶಿಸಿ ಎರಡು ವಿಕೆಟ್ ಕಬಳಿಸಿದರು.
ಅಂತಿಮ ಓವರ್ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 10 ರನ್ಗಳ ಅಗತ್ಯವಿದ್ದ ಸಂದರ್ಭದಲ್ಲಿ ಭಾರತದ ವೇಗಿ ಅರ್ಶ್ದೀಪ್ ಸಿಂಗ್ ಮಾರಕ ಬೌಲಿಂಗ್ ನಡೆಸಿದರು ಮತ್ತು ಕೇವಲ ಮೂರು ರನ್ಗಳನ್ನು ಬಿಟ್ಟುಕೊಟ್ಟರು ಮತ್ತು ಅಪಾಯಕಾರಿ ಎನಿಸಿದ್ದ ನಾಯಕ ಮ್ಯಾಥ್ಯೂ ವೇಡ್ ಅವರ ಪ್ರಮುಖ ವಿಕೆಟ್ ಪಡೆದರು. ಅಂತಿಮವಾಗಿ ಭಾರತಕ್ಕೆ ಆರು ರನ್ಗಳ ಗೆಲುವು ಖಚಿತಪಡಿಸಿದರು.
ಅರ್ಶ್ದೀಪ್ ಸಿಂಗ್ ಅವರ 'ಮಾಂತ್ರಿಕ' ಅಂತಿಮ ಓವರ್ ಈ ಕಡಿಮೆ ಸ್ಕೋರ್ ಥ್ರಿಲ್ಲರ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಾಧಿಸಲು ಅವಕಾಶ ಮಾಡಿಕೊಟ್ಟ ತಿರುವು ಎಂದು ಪ್ರಶಂಸಿಸಲಾಯಿತು.
ಆಸ್ಟ್ರೇಲಿಯಾ ತಂಡದ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಜೋಶ್ ಫಿಲಿಪ್ ಜೋಡಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿತು. ಆದರೆ ಮುಖೇಶ್ ಕುಮಾರ್, ಅರ್ಶ್ದೀಪ್ ಸಿಂಗ್ ನೇತೃತ್ವದ ಭಾರತದ ಬೌಲಿಂಗ್ ದಾಳಿಯು ರವಿ ಬಿಷ್ಣೋಯ್ ಅವರ ಬೆಂಬಲದೊಂದಿಗೆ ಇನ್ನಿಂಗ್ಸ್ನಾದ್ಯಂತ ಒತ್ತಡವನ್ನು ಉಳಿಸಿಕೊಂಡಿತು.
ಪ್ರಶಸ್ತಿ ಸಮಾರಂಭದ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಆಟಗಾರರ ಪಕ್ಕಕ್ಕೆ ಹೋಗಲು ನಿರ್ಧರಿಸಿದರು ಮತ್ತು ಯುವ ಆಟಗಾರರಾದ ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಅವರಿಗೆ ಟ್ರೋಫಿಯನ್ನು ಎತ್ತುವಂತೆ ತಿಳಿಸಿದರು.
ಭಾರತವು 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ನಂತರ ನಾಯಕರಾಗಿದ್ದ ಎಂಎಸ್ ಧೋನಿ ಪ್ರಾರಂಭಿಸಿದ ಈ ಸಂಪ್ರದಾಯವನ್ನು ನಂತರ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹವರು ಮುಂದುವರಿಸಿದ್ದಾರೆ.
ಅಭಿಷೇಕ್ ನಾಯರ್ ಅವರು ಜಿಯೋಸಿನಿಮಾದಲ್ಲಿ ಅದರ ಬಗ್ಗೆ ಪ್ರತಿಕ್ರಿಯಿಸಿದಂತೆ ಸಂಪ್ರದಾಯವನ್ನು ಮುಂದುವರೆಸುವುದನ್ನು ನೋಡಿ ಸಂತೋಷಪಟ್ಟರು. "ಯುವ ಹಾಗೂ ಹೊಸ ಆಟಗಾರರಿಗೆ ಟ್ರೋಫಿ ನೀಡಿ ಎತ್ತಲು ಹೇಳುವ ಈ ಸಂಪ್ರದಾಯವನ್ನು ಮುಂದುವರಿಸುವುದನ್ನು ನೋಡುವುದು ಒಳ್ಳೆಯದು. ಸೂರ್ಯಕುಮಾರ್ ಯಾದವ್ ಅವರು ಟ್ರೋಫಿಯನ್ನು ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಅವರಿಗೆ ಹಸ್ತಾಂತರಿಸಿದ್ದಾರೆ. ಅವರು ಈಗ ಸಹಾಯಕ ಸಿಬ್ಬಂದಿಯನ್ನು ಕರೆಯುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಅಭಿಷೇಕ್ ನಾಯರ್ ಹೇಳಿದರು.