
ಸೋಮವಾರ, ಮಾರ್ಚ್ 13ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಅಂತಿಮ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.
ಈ ಮೂಲಕ ಸ್ಟೀವನ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಆಟಕ್ಕೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 571 ರನ್ ಪೇರಿಸಿತು. ಇದರಲ್ಲಿ ವಿರಾಟ್ ಕೊಹ್ಲಿ 364 ಎಸೆತಗಳಲ್ಲಿ 186 ರನ್ ಬಾರಿಸಿದರು.
ಇದೇ ವೇಳೆ ವಿರಾಟ್ ಕೊಹ್ಲಿ ಶತಕ ಗಳಿಸಿದ ವಿಧಾನದ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ದ್ರಾವಿಡ್ ಅವರನ್ನು ಕೇಳಿದಾಗ, ಈ ಟೆಸ್ಟ್ ಸರಣಿಯುದ್ದಕ್ಕೂ ತಮ್ಮ ಅಹಂಕಾರವನ್ನು ಬದಿಗಿಟ್ಟು ಆಡಿದ್ದಕ್ಕಾಗಿ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

"ನಾವು ಗಮನಿಸಬೇಕಾದ ಒಂದು ಉತ್ತಮ ವಿಷಯವೆಂದರೆ, ನೀವು ಎಷ್ಟೇ ಶ್ರೇಷ್ಠ ಆಟಗಾರರಾಗಿದ್ದರೂ, ಕೆಲವೊಮ್ಮೆ ನಿಮ್ಮ ಅಹಂಕಾರವನ್ನು ಬದಿಗಿಡಬೇಕಾಗುತ್ತದೆ. ಅದಕ್ಕಾಗಿಯೇ ವಿರಾಟ್ ಕೊಹ್ಲಿ 75 ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಆಡಿದ್ದು ನನ್ನ ಶೈಲಿಯ ಆಟ. ನಾನು ಮಾತ್ರ ಈ ರೀತಿ ಆಡುತ್ತೇನೆ," ಎಂದು ಕೋಚ್ ರಾಹುಲ್ ದ್ರಾವಿಡ್ ಪಂದ್ಯದ ನಂತರದ ಸಂದರ್ಶನದಲ್ಲಿ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
"ಇಂತಹ ಪಂದ್ಯದಲ್ಲಿ ಶ್ರೇಷ್ಠ ಆಟಗಾರನು ತಂಡಕ್ಕಾಗಿ ಸ್ವಲ್ಪ ರಕ್ಷಣಾತ್ಮಕ ಆಟ ಆಡಿದರೆ ಒಳ್ಳೆಯದು. ನಿಮಗೆ ಎದುರಾಳಿಗಳು ಬೌಂಡರಿಗಳನ್ನು ನೀಡದಿದ್ದರೂ, ನೀವು ವಿಭಿನ್ನವಾಗಿ ಮತ್ತು ರಕ್ಷಣಾತ್ಮಕವಾಗಿ ಆಡಿದರೆ ಶತಕವನ್ನು ಗಳಿಸಬಹುದು ಎಂದು ವಿರಾಟ್ ಕೊಹ್ಲಿ ತೋರಿಸಿದರು. ಕೊಹ್ಲಿ ಮೊದಲ 100 ರನ್ ಗಳಿಸಿದಾಗ ಕೇವಲ ಐದು ಬೌಂಡರಿಗಳನ್ನು ಬಾರಿಸಿದ್ದರು," ಎಂದು ರಾಹುಲ್ ದ್ರಾವಿಡ್ ಗಮನಸೆಳೆದರು.

"ಆಸ್ಟ್ರೇಲಿಯಾ ಬೌಲರ್ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ವಿರಾಟ್ ಕೊಹ್ಲಿ ಸುಲಭವಾಗಿ ತನ್ನ ವಿಕೆಟ್ ನೀಡಬಹುದಿತ್ತು. ವಿರಾಟ್ ಕೊಹ್ಲಿ ಹತಾಶರಾಗಿ, ತಾಳ್ಮೆ ಕಳೆದುಕೊಂಡು ಬ್ಯಾಟ್ ಬೀಸಬಹುದಿತ್ತು. ಆದರೆ, ಆ ಪರಿಸ್ಥಿತಿಯಲ್ಲಿ ತಂಡಕ್ಕೆ ಅದು ಅಗತ್ಯವಿರಲಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿದಿದ್ದರು. ಇದು ಶ್ರೇಷ್ಠ ಆಟಗಾರನ ವಿಶೇಷತೆಯಾಗಿದೆ," ಎಂದು ಭಾರತ ತಂಡದ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶತಕದ ನಡುವೆ ಸಾಮ್ಯತೆ; ರಾಹುಲ್ ದ್ರಾವಿಡ್
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ ಶತಕ ಮತ್ತು ನಾಲ್ಕನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಶತಕದ ನಡುವಿನ ಸಾಮ್ಯತೆಯನ್ನು ರಾಹುಲ್ ದ್ರಾವಿಡ್ ತಿಳಿಸಿದರು.
"ನಾಗ್ಪುರದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾರ ಶತಕವನ್ನು ನಾವು ನೋಡಿದ್ದೇವೆ. ಮೊದಲ ದಿನ ವೇಗವಾಗಿ ರನ್ ಗಳಿಸಿದರು. ನಂತರ, ಎರಡನೇ ದಿನದಲ್ಲಿ ಆಸ್ಟ್ರೇಲಿಯಾ ತಂಡ ಅವರ ಮೇಲೆ ಒತ್ತಡ ಹೇರಿತು. ಆಗ ರೋಹಿತ್ ಶರ್ಮಾ ಸ್ವಲ್ಪ ರಕ್ಷಣಾತ್ಮಕವಾಗಿ ಆಡಿದರು. ಮೈದಾನದಲ್ಲಿ ಸಂಯಮದಿಂದ ಆಡಿ ಶತಕ ಗಳಿಸಿದರು," ಎಂದು ರಾಹುಲ್ ದ್ರಾವಿಡ್ ನೆನಪಿಸಿದರು.
ನಾಲ್ಕನೇ ಪಂದ್ಯದಲ್ಲಿ 364 ಎಸೆತಗಳಲ್ಲಿ 15 ಬೌಂಡರಿಗಳ ಸಮೇತ 185 ರನ್ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆಲ್ರೌಂಡರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದರು.