
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕಾಗಿ ಒಂದು ವಾರ ಮುಂಚಿತವಾಗಿ ಭಾರತ ಟೆಸ್ಟ್ ತಂಡದ ಸದಸ್ಯರು ನಾಗ್ಪುರಕ್ಕೆ ಬಂದಿಳಿದರು.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಮುಖಾಮುಖಿ ನಡೆಯಲಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಸ್ಪರ್ಧಿಗಳನ್ನು ಖಚಿತಪಡಿಸಲಿದೆ.
ತವರಿನ ಟೆಸ್ಟ್ ಸರಣಿಯಲ್ಲಿ ಭಾರತ ಯಾವಾಗಲೂ ಮೇಲುಗೈ ಸಾಧಿಸುತ್ತಾ ಬಂದಿದೆ. ಅಲ್ಲದೇ 2004ರಿಂದ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಲ್ಲ ಎಂಬುದು ಪ್ರಮುಖ ಸಂಗತಿಯಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಮುನ್ನ ಭಾರತೀಯ ಆಟಗಾರರು ತಂಡದ ಶಿಬಿರವನ್ನು ಸೇರಿಕೊಳ್ಳುತ್ತಿರುವುದು ಕಂಡುಬಂದಿದೆ. ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಫೆಬ್ರವರಿ 2ರ ಗುರುವಾರ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ನಿರೀಕ್ಷೆಯಿದೆ. ಈ ಋತುವಿನ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಸೌರಾಷ್ಟ್ರ ತಂಡದ ಪರವಾಗಿ ಆರು ತಿಂಗಳ ನಂತರ ರವೀಂದ್ರ ಜಡೇಜಾ ವೃತ್ತಿಪರ ಕ್ರಿಕೆಟ್ಗೆ ಮರಳಿದರು.

ಚೆನ್ನೈನಲ್ಲಿ ನಡೆದ ಎರಡನೇ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ತಮಿಳುನಾಡು ವಿರುದ್ಧ ಏಳು ವಿಕೆಟ್ಗಳನ್ನು ಕಬಳಿಸುವ ಮೂಲಕ ತಾನು ಇನ್ನೂ ಕ್ರಿಕೆಟ್ ಮರೆತಿಲ್ಲ ಮತ್ತು ಟೆಸ್ಟ್ ಸರಣಿಗೆ ಪೂರ್ಣ ಸಿದ್ಧನಿದ್ದೇನೆ ಎಂಬ ಸಂದೇಶ ರವಾನಿಸಿದರು.
ಆಸ್ಟ್ರೇಲಿಯಾದ ನಾಥನ್ ಲಿಯಾನ್ ಮತ್ತು ಆಶ್ಟನ್ ಅಗರ್ ಅವರ ಸ್ಪಿನ್ ಬೌಲಿಂಗ್ ವಿರುದ್ಧ ಅಗ್ನಿಪರೀಕ್ಷೆಗೆ ಒಳಪಡುವ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರಂತಹ ಸ್ಟಾರ್ ಬ್ಯಾಟರ್ಗಳೊಂದಿಗೆ ರವೀಂದ್ರ ಜಡೇಜಾ ಅವರ ಆಲ್ರೌಂಡ್ ಪ್ರದರ್ಶನ ಆತಿಥೇಯ ಭಾರತ ತಂಡಕ್ಕೆ ನಿರ್ಣಾಯಕವಾಗಿದೆ.
ನಾಥನ್ ಲಿಯಾನ್ ಮತ್ತು ಆಶ್ಟನ್ ಅಗರ್ ಈ ಇಬ್ಬರನ್ನು ಹೊರತುಪಡಿಸಿ, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಝೆಲ್ವುಡ್ ಕೂಡ ಮಾರಕ ಬೌಲಿಂಗ್ ದಾಳಿ ನಡೆಸುವ ಸಾಧ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಮತ್ತು ಕಳೆದ ಎರಡು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಬಿಟ್ಟುಕೊಟ್ಟಿದೆ.