
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಆತಿಥ್ಯವನ್ನು ಧರ್ಮಶಾಲಾದ HPCA ಸ್ಟೇಡಿಯಂಗೆ ನೀಡಲಾಗಿತ್ತು. ಆದರೆ ಇದೀಗ ಮಾರ್ಚ್ 1ರಿಂದ 5ರವರೆಗೆ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯದ ಆತಿಥ್ಯವನ್ನು ಧರ್ಮಶಾಲಾ ಕಳೆದುಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿ (HPCA) ಸ್ಟೇಡಿಯಂನಲ್ಲಿ ನಡೆದ ಇತ್ತೀಚಿನ ನವೀಕರಣದ ನಂತರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಮೈದಾನವು ಇನ್ನೂ ಯೋಗ್ಯವಾಗಿಲ್ಲ ಮತ್ತು ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಸಿದ್ಧಪಡಿಸುವುದು ಅಸಾಧ್ಯವಾದ ಕಾರಣ ಸ್ಥಳಾಂತರವಾಗಲಿದೆ ಎಂದು ತಿಳಿದುಬಂದಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, ಬಿಸಿಸಿಐ ತಜ್ಞರ ತಂಡವು ಮಾಡುವ ತಪಾಸಣೆಯ ಫಲಿತಾಂಶದ ಆಧಾರದ ಮೇಲೆ ಕೆಲವೇ ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.
ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ವಿಶ್ವದ ಅತ್ಯಂತ ರಮಣೀಯ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ. 2020ರ ಆರಂಭದಲ್ಲಿ ಕೋವಿಡ್-19 ಮುನ್ನ ಇಲ್ಲಿ ಕೊನೆಯದಾಗಿ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು.

ಬಾರ್ಡರ್-ಗವಾಸ್ಕರ್ ಟ್ರೋಫಿಯ 2016-17 ಋತುವಿನಲ್ಲಿ ನಡೆದ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಲಾಗಿತ್ತು ಮತ್ತು ಭಾರತ ತಂಡ ನಾಲ್ಕು ದಿನಗಳಲ್ಲಿ ಪಂದ್ಯವನ್ನು ಗೆದ್ದು ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಕಳೆದ ವರ್ಷದ ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಟಿ20 ಪಂದ್ಯಗಳು ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಾಗಿವೆ.
ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದ ಔಟ್ಫೀಲ್ಡ್ ಸರಿಪಡಿಸಲು ಮತ್ತು ಹೊಸ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಇದೀಗ ಔಟ್ಫೀಲ್ಡ್ ಇನ್ನೂ ಸಿದ್ಧವಾಗಿಲ್ಲ ಮತ್ತು ಕ್ರೀಡಾಂಗಣದಲ್ಲಿ ಹುಲ್ಲಿನ ಹೊದಿಕೆಯನ್ನು ನಿರ್ಮಿಲಾಗಿಲ್ಲ. ಈ ಕಾರಣದಿಂದ ಮೂರನೇ ಪಂದ್ಯವನ್ನು ಸ್ಥಳಾಂತರಿಸಲು ಯೋಚಿಸಲಾಗುತ್ತಿದೆ.

ಫೆಬ್ರವರಿ 17ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಅಂತಿಮ ಎರಡು ಟೆಸ್ಟ್ಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿಲ್ಲ. ಅಂತಿಮ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ 9ರಿಂದ 13ರವರೆಗೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.