
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜಾ ಮತ್ತು ಕ್ಯಾಮೆರಾನ್ ಗ್ರೀನ್ 2ನೇ ದಿನದಂದು ಬ್ಯಾಟಿಂಗ್ನಲ್ಲಿ ಮೇಲುಗೈ ಸಾಧಿಸಿ, ಆತಿಥೇಯರ ವಿರುದ್ಧ ಬೃಹತ್ ಮೊತ್ತ ಗಳಿಸಲು ಕಾರಣರಾದರು.
ಉಸ್ಮಾನ್ ಖವಾಜಾ ಮತ್ತು ಕ್ಯಾಮೆರಾನ್ ಗ್ರೀನ್ ಅವರ ಅವಳಿ ಶತಕಗಳ ಸಹಾಯದಿಂದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 480 ರನ್ಗಳನ್ನು ಕಲೆಹಾಕಿದೆ. ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಇನ್ನಿಂಗ್ಸ್ನಲ್ಲಿ ಅತಿದೊಡ್ಡ ಮೊತ್ತವಾಗಿದೆ.
ಇದೀಗ ಭಾರತದ ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ ಅವರು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅವರನ್ನು ಶ್ಲಾಘಿಸಿದ್ದಾರೆ. ಕಳೆದ 7-8 ವರ್ಷಗಳಲ್ಲಿ ಭಾರತದಲ್ಲಿ ಆಡಿದ ಅತ್ಯುತ್ತಮ ವಿದೇಶಿ ಆರಂಭಿಕ ಬ್ಯಾಟರ್ ಎಂದು ಉಸ್ಮಾನ್ ಖವಾಜಾ ಅವರನ್ನು ಹೊಗಳಿದರು.

ಮೊದಲ ಎರಡು ದಿನಗಳಲ್ಲಿ ರನ್ ಗಳಿಸಲು ಕಷ್ಟಕರವಾಗಿ ನಿಧಾನಗತಿಯ ಪಿಚ್ನಲ್ಲಿ ಉಸ್ಮಾನ್ ಖವಾಜಾ ಅವರು 422 ಎಸೆತಗಳನ್ನು ಎದುರಿಸಿದರು.
"ಉಸ್ಮಾನ್ ಖವಾಜಾ ತಮ್ಮ 180 ರನ್ಗಳ ಪ್ರದರ್ಶನದಲ್ಲಿ ಸರಳವಾಗಿ ಅದ್ಭುತವಾಗಿದ್ದರು. ಪಿಚ್ ಎಷ್ಟೇ ಸಮತಟ್ಟಾಗಿದ್ದರೂ, ಹೆಚ್ಚಿನ ಸಮಯ ಏಕಾಗ್ರತೆ ವಹಿಸಿ ಬ್ಯಾಟಿಂಗ್ ಮಾಡುವುದು ಎಂದಿಗೂ ಸುಲಭವಲ್ಲ. ಉಸ್ಮಾನ್ ಖವಾಜಾ ಔಟಾಗಿದ್ದು ಸ್ವತಃ ಏಕಾಗ್ರತೆಯ ಕೊರತೆಯಿಂದ. ಆದರೆ, ಅವರು ಖಂಡಿತವಾಗಿಯೂ ವಿದೇಶದಲ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ. ಕಳೆದ 7-8 ವರ್ಷಗಳಲ್ಲಿ ಭಾರತೀಯ ನೆಲದಲ್ಲಿ ಅತ್ಯುತ್ತಮವಾಗಿ ಆಡಿದ ಆರಂಭಿಕ ಆಟಗಾರ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಸ್ಫೋಟಕ ಶತಕ ಬಾರಿಸಿದ ಆಸ್ಟ್ರೇಲಿಯಾದ ಯುವ ಆಟಗಾರ ಕ್ಯಾಮೆರಾನ್ ಗ್ರೀನ್ ಅವರನ್ನೂ ಸಹ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಶ್ಲಾಘಿಸಲು ಮರೆಯಲಿಲ್ಲ. ಭಾರತದ ಬೌಲರ್ಗಳು ಕ್ಯಾಮೆರಾನ್ ಗ್ರೀನ್ಗೆ ಯಾವುದೇ ಶಾರ್ಟ್ಬಾಲ್ಗಳನ್ನು ಹಾಕಲಿಲ್ಲ, ಇದು ಅಹಮದಾಬಾದ್ನಲ್ಲಿ ಕ್ಯಾಮೆರಾನ್ ಗ್ರೀನ್ ರನ್ ವೇಗಕ್ಕೆ ಕಡಿವಾಣ ಬಿದ್ದಿತು ಎಂಬ ಅಂಶವನ್ನು ಆಕಾಶ ಚೋಪ್ರಾ ನಿರಾಕರಿಸಿದರು.

"ಕ್ಯಾಮೆರಾನ್ ಗ್ರೀನ್ ವಿಶೇಷವಾದ ಶತಕವನ್ನು ಗಳಿಸಿದರು ಮತ್ತು ಅವರು ಜಗತ್ತು ಕಂಡ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾಗುತ್ತಾರೆ. ಭಾರತದ ಬೌಲರ್ಗಲು ಕ್ಯಾಮೆರಾನ್ ಗ್ರೀನ್ಗೆ ಶಾರ್ಟ್ ಬಾಲ್ ಅನ್ನು ಸಹ ಪ್ರಯತ್ನಿಸಲಿಲ್ಲ, ಇದು ನಾನು ನೋಡಿ ನಿರಾಶೆಗೊಂಡ ಒಂದು ವಿಷಯ," ಎಂದು ಆಕಾಶ್ ಚೋಪ್ರಾ ಹೇಳಿದರು.
ಇನ್ನು 36 ರನ್ಗಳಿಂದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಪ್ರಾರಂಭಿಸಿರುವ ಭಾರತ ತಂಡವು ರೋಹಿತ್ ಶರ್ಮಾ ರೂಪದಲ್ಲಿ ವಿಕೆಟ್ ಕಳೆದುಕೊಂಡಿದೆ. 35 ರನ್ ಗಳಿಸಿದ್ದಾಗ ಭಾರತದ ನಾಯಕ ಮ್ಯಾಥ್ಯೂ ಕುಹ್ನೆಮನ್ ಬೌಲಿಂಗ್ನಲ್ಲಿ ಔಟಾದರು.
ಚೇತೇಶ್ವರ ಪೂಜಾರ ಮತ್ತು ಶುಭ್ಮನ್ ಗಿಲ್ ಕ್ರೀಸ್ನಲ್ಲಿದ್ದು, ಸದ್ಯ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 82 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರವಾಗಿ ಅರ್ಹತೆ ಪಡೆಯಲು ಗೆಲುವಿನ ಅಗತ್ಯವಿರುವುದರಿಂದ, ಆತಿಥೇಯ ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸಲು ಎದುರು ನೋಡುತ್ತಿದ್ದಾರೆ.