
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಅಂತಿಮ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಂದ ಬೃಹತ್ ಮೊತ್ತ ದಾಖಲಾದ ನಂತರ, ಪಂದ್ಯವನ್ನು ಅಂತಿಮವಾಗಿ 5ನೇ ದಿನದಂದು ಡ್ರಾ ಎಂದು ನಿರ್ಧರಿಸಲಾಯಿತು.
ನಾಲ್ಕನೇ ಪಂದ್ಯ ಡ್ರಾಗೊಂಡ ನಂತರ, ಭಾರತ ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಜೆರ್ಸಿಯನ್ನು ಆಸ್ಟ್ರೇಲಿಯಾದ ಆಟಗಾರರಾದ ಉಸ್ಮಾನ್ ಖವಾಜಾ ಮತ್ತು ಅಲೆಕ್ಸ್ ಕ್ಯಾರಿಗೆ ಉಡುಗೊರೆಯಾಗಿ ನೀಡಿದರು. ಪಂದ್ಯದ ನಂತರದ ಪ್ರಶಸ್ತಿ ಸಮಾರಂಭದ ಮೊದಲು ವಿರಾಟ್ ಕೊಹ್ಲಿ ತಮ್ಮ ಜೆರ್ಸಿ ಮೇಲೆ ಸಹಿ ಮಾಡಿ ನೀಡುವುದನ್ನು ಸೆರೆಹಿಡಿಯಲಾಗಿದೆ.

ಅಹಮದಾಬಾದ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ 5ನೇ ದಿನದಂದು ಸ್ಥಗಿತಗೊಂಡ ನಂತರ ವಿರಾಟ್ ಕೊಹ್ಲಿಯ ಹೃದಯಸ್ಪರ್ಶಿ ನಡವಳಿಕೆ ಕಂಡುಬಂತು.
ಸ್ಟೀವನ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 78.1 ಓವರ್ಗಳನ್ನು ಆಡಿ 2 ವಿಕೆಟ್ಗಳ ನಷ್ಟಕ್ಕೆ 175 ರನ್ ಗಳಿಸಿತು. ನಂತರ, ಉಭಯ ತಂಡಗಳ ನಾಯಕರಾದ ಸ್ಟೀವನ್ ಸ್ಮಿತ್ ಮತ್ತು ರೋಹಿತ್ ಶರ್ಮಾ ಇಬ್ಬರೂ ಪಂದ್ಯವನ್ನು ಡ್ರಾಗೊಳಿಸಲು ಪರಸ್ಪರ್ ಒಪ್ಪಿಗೆ ಸೂಚಿಸಿದರು.
ಈ ಪಂದ್ಯದಲ್ಲಿ 364 ಎಸೆತಗಳಲ್ಲಿ 15 ಬೌಂಡರಿಗಳ ಸಮೇತ 185 ರನ್ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆಲ್ರೌಂಡರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದರು.

ಆಸ್ಟ್ರೇಲಿಯಾ ತಂಡವನ್ನು ಬೇಗನೇ ಆಲೌಟ್ ಮಾಡುವ ಲೆಕ್ಕಾಚಾರವನ್ನು ಆತಿಥೇಯ ಭಾರತ ತಂಡ ಯೋಜನೆ ಹಾಕಿಕೊಂಡಿತ್ತು. ಆರಂಭಿಕರಾದ ಮ್ಯಾಥ್ಯೂ ಕುಹ್ನೆಮನ್ ಮತ್ತು ಟ್ರಾವಿಸ್ ಹೆಡ್ ಪ್ರವಾಸಿ ತಂಡದ ಬ್ಯಾಟಿಂಗ್ ಆರಂಭಿಸಿದರು. ಆಸ್ಟ್ರೇಲಿಯಾ ತಂಡ ತನ್ನ ಇನಿಂಗ್ಸ್ನ 11ನೇ ಓವರ್ನಲ್ಲಿ ಮ್ಯಾಥ್ಯೂ ಕುಹ್ನೆಮನ್ ಔಟಾದರು. ಟ್ರಾವಿಸ್ ಹೆಡ್ ಮಾತ್ರ ಚಂಚಲಗೊಳ್ಳದೆ, ನಿಧಾನಗತಿಯಲ್ಲಿ 90 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಉತ್ತಮ ಆಡುತ್ತಿದ್ದ ಮತ್ತು ಶತಕದಂಚಿನಲ್ಲಿದ್ದ ಟ್ರಾವಿಸ್ ಹೆಡ್ ಅವರನ್ನು ಅಕ್ಷರ್ ಪಟೇಲ್ ತಮ್ಮ ಸ್ಪಿನ್ ಬಲೆಗೆ ಬೀಳಿಸಿದರು. ಆಫ್ ಸ್ಟಂಪ್ ಹೊರಗಿದ್ದ ಬಾಲ್ ಅನ್ನು ಮುಂದೆ ಬಂದು ಆಡಲು ಹೋದ ಟ್ರಾವಿಸ್ ಹೆಡ್ ಬ್ಯಾಟ್ ವಂಚಿಸಿ ಒಳನುಸುಳಿದ ಬಾಲ್ ಸ್ಟಂಪ್ಗೆ ಬಡಿಯಿತು.
ಟ್ರಾವಿಸ್ ಹೆಡ್ ವಿಕೆಟ್ ಪಡೆದ ನಂತರ ಭಾರತದ ಪಾಳಯದಲ್ಲಿ ಭರವಸೆಯ ಕಿರಣವೊಂದು ಮೂಡಿತ್ತು. ಆದರೆ ನಾಯಕ ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದರು. ವಿಕೆಟ್ ನೀಡದೆ ಆಡುತ್ತಿದ್ದ ಅವರು ಭಾರತದ ಗೆಲುವಿನ ಆಸೆಗೆ ಹುಳಿ ಹಿಂಡಿದರು.
ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ 139 ರನ್ಗಳ ಜೊತೆಯಾಟ ನೀಡಿದರೆ, ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ ಮುರಿಯದ 22 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡರು.
ಭಾರತ ತಂಡಕ್ಕೆ ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶ್ಚಾಗ್ನೆ ಜೊಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸ್ಟೀವನ್ ಸ್ಮಿತ್ ಮತ್ತು ರೋಹಿತ್ ಶರ್ಮಾ ಇಬ್ಬರೂ ನಾಯಕರು ಐದನೇ ದಿನದ ಅರ್ಧಕ್ಕೆ ಪಂದ್ಯವನ್ನು ಸ್ಥಗಿತಗೊಳಿಸಲು ನಿರ್ಧರಿಸಿದರು.