ಭಾರತದ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ನಿರೀಕ್ಷೆಯಂತೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಶಹಬಾಜ್ ಅಹ್ಮದ್ ಬದಲಿಗೆ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದು, ಕುಲದೀಪ್ ಸೇನ್ ಬದಲಿಗೆ ಉಮ್ರಾನ್ ಮಲಿಕ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಬಾಂಗ್ಲಾದೇಶ ತಂಡದಲ್ಲಿ ಕೂಡ ಒಂದು ಬದಲಾವಣೆ ಮಾಡಿದ್ದು, ಮಧ್ಯಮ ವೇಗದ ಬೌಲರ್ ಹಸನ್ ಮಹ್ಮದ್ ಬದಲಿಗೆ ಸ್ಪಿನ್ನರ್ ನಸುಮ್ ಅಹ್ಮದ್ ಆಡುವ ಬಳಗ ಸೇರಿಕೊಂಡಿದ್ದಾರೆ. 2016ರ ಬಳಿಕ ಬಾಂಗ್ಲಾದೇಶ ತವರಿನಲ್ಲಿ ಏಕದಿನ ಸರಣಿಯನ್ನು ಸೋತಿಲ್ಲ, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆ ದಾಖಲೆಯನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.
ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು
ಟಾಸ್ ಗೆದ್ದ ಬಳಿಕ ಮಾತನಾಡಿದ ನಾಯಕ ಲಿಟ್ಟನ್ ದಾಸ್, "ನಾವು ಮೊದಲು ಬ್ಯಾಟಿಂಗ್ ಮಾಡುತ್ತವೇ. ಮೊದಲನೇ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟವಾಗಿತ್ತು. ಉತ್ತಮ ರನ್ ಕಲೆಹಾಕಿದರೆ ನಮ್ಮ ಬೌಲರ್ ಅದನ್ನು ರಕ್ಷಣೆ ಮಾಡುವ ಭರವಸೆ ಇದೆ. ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಹಸನ್ ಮಹಮ್ಮದ್ ಬದಲಿಗೆ ನಸುಮ್ ಆಡುತ್ತಿದ್ದಾರೆ" ಎಂದು ಹೇಳಿದರು.
ಬ್ಯಾಟರ್ ಎಚ್ಚರಿಕೆಯಿಂದ ಆಡಬೇಕು
ಮೊದಲ ಪಂದ್ಯದಲ್ಲಿ ಬಳಸಿದ ಪಿಚ್ಗಿಂತ ಭಿನ್ನವಾದ ಪಿಚ್ನಲ್ಲಿ ಎರಡನೇ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳಿಗೆ ಪಿಚ್ ಹೆಚ್ಚಿನ ನೆರವು ನೀಡಿತ್ತು ಮತ್ತು ಬೌನ್ಸ್ ಕೂಡ ಇತ್ತು. ಎರಡನೇ ಪಂದ್ಯದಲ್ಲಿ ಆಡುತ್ತಿರುವ ಪಿಚ್ ವಿಭಿನ್ನವಾಗಿದೆ. ಬ್ಯಾಟರ್ ಗಳು ಕೆಲ ಸಮಯ ಎಚ್ಚರಿಕೆಯಿಂದ ಆಡಿದರೆ ನಂತರ ಉತ್ತಮವಾಗಿ ರನ್ ಗಳಿಸಬಹುದಾಗಿದೆ. ಆದರೆ, ಮೊದಲನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಿದಂತೆ ಆಡಿದರೆ ಮಾತ್ರ ಉತ್ತಮ ರನ್ ಗಳಿಸಲು ಸಾಧ್ಯ ಎಂದು ಅಂಜುಮ್ ಚೋಪ್ರಾ ಹೇಳಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬಾಂಗ್ಲಾದೇಶ : ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್