
ಆಟಗಾರರ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಈ ವರ್ಷ ಸಾಕಷ್ಟು ನಷ್ಟ ಅನುಭವಿಸಿದೆ. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಕೂಡ ಇದು ಮುಂದುವರೆದಿದೆ. ವೇಗದ ಬೌಲರ್ ನವದೀಪ್ ಸೈನಿ ಗಾಯಗೊಂಡು ಹೊರಬಿದ್ದ ನಂತರ, ತಂಡದ ನಾಯಕ ಕೆಎಲ್ ರಾಹುಲ್ ಕೂಡ ಕೈಗೆ ಗಾಯಮಾಡಿಕೊಂಡಿದ್ದಾರೆ.
2ನೇ ಟೆಸ್ಟ್ ಆರಂಭದ ಮುನ್ನಾದಿನ ಬುಧವಾರ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮಾಡಿದರು. ಕೆಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ಕೈಗೆ ಚೆಂಡು ತಾಗಿ ಗಾಯಗೊಂಡಿದ್ದಾರೆ.
ಕೆಎಲ್ ರಾಹುಲ್ ಗಾಯಗೊಂಡಿರುವುದು ತಂಡದ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಗಾಯ ಗಂಭೀರವಾಗಿಲ್ಲ ಎಂದು ಹೇಳಲಾಗುತ್ತಿದೆ. ವೈದ್ಯರು ರಾಹುಲ್ ಅವರನ್ನು ಪರಿಶೀಲನೆ ನಡೆಸುತ್ತಿದ್ದು, ನಂತರವಷ್ಟೆ ನಾಳಿನ ಪಂದ್ಯಕ್ಕೆ ಅವರು ಲಭ್ಯವಾಗುವ ಬಗ್ಗೆ ಖಚಿತವಾಗಿ ತಿಳಿಯಲಿದೆ.
"ಕೆಎಲ್ ರಾಹುಲ್ ಗಾಯ ಗಂಭೀರವಾದುದಲ್ಲ, ಬ್ಯಾಟಿಂಗ್ ವೇಳೆ ಸಣ್ಣ ಪೆಟ್ಟಾಗಿದೆ, ಅವರು ಚೆನ್ನಾಗಿದ್ದಾರೆ ನಾಳಿನ ಪಂದ್ಯದಲ್ಲಿ ಆಡುವ ಭರವಸೆ ಇದೆ" ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಗಾಯ
ಬುಧವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕೆಎಲ್ ರಾಹುಲ್ಗೆ ಥ್ರೋಡೌನ್ಗನ್ನು ನೀಡುತ್ತಿದ್ದರು. ಆದರೆ, ಒಂದು ಎಸೆತ ಕೆಎಲ್ ರಾಹುಲ್ ಕೈಗೆ ತಲುಪಿತು, ರಾಹುಲ್ ನೋವಿನಿಂದ ನರಳಿದರು, ತಕ್ಷಣ ಫಿಸಿಯೋಗಳು ಅವರಿಗೆ ಚಿಕಿತ್ಸೆ ನೀಡಿದರು.
ಭಾರತ ತಂಡದ ನಾಯಕ ಕೆಎಲ್ ರಾಹುಲ್ ಎಡಗೈ ಹೆಬ್ಬೆರಳಿಗೆ ಪೆಟ್ಟು ಬಿದ್ದಿದೆ. ನೋವು ಕಾಣಿಸಿಕೊಂಡ ಕಾರಣ ಐಸ್ ಬ್ಯಾಗ್ ಇಡುವ ಮೂಲಕ ನೋವು ಕಡಿಮೆ ಮಾಡಿಕೊಳ್ಳಲು ಯತ್ನಿಸಿದರು.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದರು. ನಾಯಕನಾದ ಮೊದಲ ಪಂದ್ಯವನ್ನು ಗೆದ್ದು ಎರಡನೇ ಪಂದ್ಯಕ್ಕೆ ಸಿದ್ಧವಾಗುತ್ತಿದ್ದರು. ಒಂದು ವೇಳೆ 2ನೇ ಟೆಸ್ಟ್ ಪಂದ್ಯಕ್ಕೆ ಕೆಎಲ್ ರಾಹುಲ್ ಅಲಭ್ಯರಾದರೆ, ಅವರ ಬದಲಾಗಿ ಚೇತೇಶ್ವರ ಪೂಜಾರ ತಂಡದ ನಾಯಕತ್ವ ನಿಭಾಯಿಸಬೇಕಾಗುತ್ತದೆ.
ಕೆಎಲ್ ರಾಹುಲ್ ಗಾಯಗೊಳ್ಳುವ ಮೂಲಕ ಬಾಂಗ್ಲಾದೇಶ ಪ್ರವಾಸದಲ್ಲಿ ಇದುವರೆಗೂ ಭಾರತ ತಂಡದ ಹಲವು ಆಟಗಾರರು ಗಾಯದ ಸಮಸ್ಯೆಗೆ ಸಿಕ್ಕಂತಾಗಿದೆ. ಈ ಮೊದಲು ರೋಹಿತ್ ಶರ್ಮಾ, ನವದೀಪ್ ಸೈನಿ, ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದರು. ಮೊಹಮ್ಮದ್ ಶಮಿ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದರು.